ವರದನಾಯಕನ ಹಳ್ಳಿ (ಶಿಡ್ಲ ಘಟ್ಟ) :ಶಾಲೆ ಎಂದರೆ ಆಟ ಪಾಟ ಎರಡರ ಮಿಶ್ರಣ ವಾಗಿದ್ದಲ್ಲಿ ವಿದ್ಯಾರ್ಥಿಗಳು ಮೌಲ್ಯಭರಿತ ಶಿಕ್ಷಣ ಪಡೆಯಲು ಸಾಧ್ಯ. ಶಾಲೆ ಎಂದರೆ ಶುಚಿತ್ವದ ಬಗ್ಗೆ, ಆರೋಗ್ಯದ ಬಗ್ಗೆ, ಗುರಹಿರಿಯರಿಗೆ ಗೌರವಿಸುವ ಬಗ್ಗೆ ಹೀಗೆ ಹತ್ತು ಹಲವು ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿ ಅವರನ್ನು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ತಯಾರಿ ಮಾಡುವುದು ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಶಿಡ್ಲಘಟ್ಟ ತಾಲೂಕಿನ ವರದನಾಯಕನ ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಕೊಂಚ ಭಿನ್ನವಾದ ಪ್ರಯತ್ನವನ್ನು ಮಾಡಿದೆ. 1954 ರಲ್ಲಿ ಆರಂಭವಾದ ಈ ಶಾಲೆಗೆ ಈಗ 68 ವರ್ಷ ಪ್ರಾಯ. ಇಲ್ಲಿ ಓದಿ ವಿದ್ಯಾವಂತರಾಗಿರುವ ಅನೇಕರು ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಂಡಿದ್ದಾರೆ. ಈ ಶಾಲೆಯ ಕೃಪೆಯಿಂದ ಎರಡು ಪೀಳಿಗೆ ಶಿಕ್ಷಿತರಾಗಿದ್ದಾರೆ.
ಈ ಶಾಲೆಯ ವಿಶೇಷತೆ ಎಂದರೆ, ಈ ಶಾಲೆಯ ಇಬ್ಬರು ಶಿಕ್ಷಕರಿಗೆ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಹಾಗೂ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಶೌರ್ಯ ಪ್ರಶಸ್ತಿ , ಜಿಲ್ಲಾ ಮಟ್ಟದ ವಿಜ್ಞಾನ ಪ್ರಶಸ್ತಿ ಲಭಿಸಿದೆ. ಶಾಲೆಗೆ ದೊರಕಿರುವ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ.
ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶಿಷ್ಟವಾಗಿದೆ. ಶಾಲೆಯ ಸುತ್ತ ಮುತ್ತ ಇದ್ದಂತಹ 2 ಎಕರೆ 15 ಗುಂಟೆ ಸ್ಥಳದಲ್ಲಿ ಮಾವು, ನೇರಳೆ, ನೆಲ್ಲಿ, ಹಲಸು, ಅತ್ತಿ, ಗಸಗಸೆ ಮುಂತಾದ ಹಣ್ಣುಗಳನ್ನು ನೀಡುವ 150ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದೆ. ಇದರ ಪ್ರಯೋಜನ ಶಾಲೆಯ ಮಕ್ಕಳು ಮತ್ತು ಪಕ್ಷಿಗಳು ಸವಿಯುವಂತಾಗಿದೆ. ಶಾಲೆಯ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಶಾಲಾ ಆವರಣದಲ್ಲಿಯೇ ಬೆಳೆಯಲಾಗುತ್ತಿದೆ.
ಶಾಲೆಯಲ್ಲಿ ನಡೆಸುವ ಕಾರ್ಯಕ್ರಮಗಳ ಜೊತೆಗೆ ಮಕ್ಕಳ ಕಲಿಕೆಗೆ, ಪ್ರೋತ್ಸಕ್ಕೆ, ಉತ್ಸ್ಸಾಹಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗುತ್ತಿದೆ. ಪ್ರತಿವರ್ಷ ಮಕ್ಕಳನ್ನು ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೊಗಲಾಗುವುದು. ಪಾಠದ ಜೋತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಲಾಗುವುದು. ಉತ್ತಮ ಶಿಕ್ಷಣದ ಜೋತೆಗೆ ಸಂಸ್ಕಾರವನ್ನೂ ಕಲಿಸಿಕೊಡಲಾಗುತ್ತಿದೆ. ಗ್ರಾಮಸ್ಥರ ಸಹಯೋಗದಿಂದ ಪಾಯಸ, ಒಬ್ಬಟ್ಟು ಮುಂತಾದ ವಿಶೇಷ ತಿನಿಸು ಊಟದ ಜೊತೆ ಸವಿಯಲು ಸಿಗುತ್ತಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯ ಮಕ್ಕಳ ಕ್ರೀಡಾ ನಿಧಿಯಿಂದ ಈ ಶಾಲೆಗೆ ಸುಮಾರು 50 ಸಾವಿರ ರೂಪಾಯಿ ವೆಚ್ಚದ ಕ್ರೀಡಾ ಸಾಮಾಗ್ರಿಗಳ ನೆರವನ್ನು ನೀಡಿದೆ.