ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದ ಭುಗಿಲೆದ್ದಿದೆ. ತಮಿಳುನಾಡಿಗೆ ರಾಜ್ಯಸರ್ಕಾರ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕೊಳ್ಳದ ರೈತರಿಂದ ಪ್ರತಿದಿನ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಯ ಕರ್ನಾಟಕ ಭವನದಲ್ಲಿ ಕಾನೂನು ತಜ್ಞರು ಮತ್ತು ಕರ್ನಾಟಕದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಇಂದು ನಮ್ಮ ಎಲ್ಲಾ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದೇವೆ. ಈಗ ಇಡೀ ತಂಡ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರನ್ನು ಭೇಟಿ ಮಾಡಲು ಹೊರಟಿದೆ. ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮಗೆ ಆದೇಶ ನೀಡಿದೆ. ನೀರು ಇಲ್ಲದಿರುವುದು ಕರ್ನಾಟಕಕ್ಕೆ ದೊಡ್ಡ ನೋವಾಗಿದೆ. ಕರ್ನಾಟಕದ ರೈತರು ಹಾಗೂ ಅವರ ಭಾವನೆಗಳನ್ನು ಗೌರವಿಸುತ್ತಾರೆ ಎಂಬ ವಿಶ್ವಾಸವಿಸಿದೆ ಎಂದರು.
ನಾವೂ ಕರ್ನಾಟಕದ ರೈತರಂತೆ ತಮಿಳುನಾಡಿನ ರೈತರಿಗೂ ಗೌರವ ನೀಡುತ್ತೇವೆ. ಆದರೆ ಕರ್ನಾಟಕದಲ್ಲಿ ಮಳೆಯಿಲ್ಲದೆ ಭೀಕರ ಬರಗಾಲದ ಸ್ಥಿತಿಯಿದೆ. ಈ ಸಂದರ್ಭ ಆ ಪ್ರಮಾಣದಲ್ಲಿ ನೀರು ಬಿಡುಗಡೆ ಕಷ್ಟ ಎಂದರು. ಇದೇ ಕಾರಣಕ್ಕೆ ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ನಾವು ಒತ್ತಾಯ ಮಾಡುತ್ತಿರುವುದು. ಈ ಯೋಜನೆಯಿಂದ ಎರಡೂ ರಾಜ್ಯದ ನೀರಿನ ತೊಂದರೆ ನೀಗಲಿದೆ ಎಂದರು.