ಬೆಂಗಳೂರು: ಭಾರತದಲ್ಲಿ 107 ಕೋಟಿ ಜನರಲ್ಲಿ 40% ಜನರಿಗೆ ಮಾತ್ರ ಕೆಲಸವಿದೆ. ಮೋದಿ ಪ್ರಧಾನಿಯಾದ ಮೇಲೆ ಯುವಕರಿಗೆ ಕೆಲಸವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ಶಕ್ತಿ ಇರುವ ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ನಗರದಲ್ಲಿ ಪ್ರದೇಶ 9% ಹಾಗೂ ಗ್ರಾಮೀಣ ಪ್ರದೇಶದಲ್ಲಿ 6 % ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಖುದ್ದಾಗಿ ಟ್ವೀಟ್ ಮಾಡಿ 2011 ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು, ಇವಾಗ ಮೋದಿ ಪ್ರಧಾನಿಯಾದ ಮೇಲೆ ವಿಶ್ವದ ಆರ್ಥಿಕತೆಯಲ್ಲಿ ಭಾರತ 164 ಸ್ಥಾನ ಪಡೆದಿದೆ ಎಂದಿದ್ದಾರೆ ಎಂದರು.
ಕೇಂದ್ರ ಸರ್ಕಾರ ಅಗ್ನಿಪಥ್ ಎಂಬ ಯೋಜನೆ ತಂದಿದ್ದಾರೆ. ಸೇನೆಯಲ್ಲಿ ಯುವಕರಿಗೆ ನಾಲ್ಕು ವರ್ಷ ಕೆಲಸ ಕೊಡುತ್ತಾರಂತೆ. ನಾಲ್ಕು ವರ್ಷ ಮುಗಿದ ಮೇಲೆ ಯುವಕರು ಏನ ಮಾಡಬೇಕು? 17 ವರ್ಷದ ವಯಸ್ಸಿಗೆ ಸೇನೆಗೆ ಸೇರಿ ಯುವಕರು ಅಲ್ಲಿಂದ ಹೊರಗಡೆ ಬಂದ ಮೇಲೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.