ಬೆಂಗಳೂರು: ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು ಬಿಜೆಪಿಯವರೇ. ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಪೋಟೋ ಹಾಕಿದ್ದಾರೆ. ಫೋಟೋ ಹಾಕಲಿ ಬೇಡ ಎನ್ನುವುದಿಲ್ಲ. ಆದರೆ, ಸಾವರ್ಕರ್ ಫೋಟೋ ಹಾಕಿ ಟಿಪ್ಪು ಪೋಟೋ ತೆಗೆದಿದ್ದಾರೆ. ಹೀಗೆ ಮಾಡಿದರೆ ಗಲಭೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರೆ. ಬಿಜೆಪಿಯವರು ತಪ್ಪು ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಮಗುವನ್ನು ಚಿವುಟುವವರೂ ಇವರೇ, ತೊಟ್ಟಿಲು ತೂಗುವವರೂ ಇವರೇ. ಘಟನೆಯಲ್ಲಿ ಎಸ್ಡಿಪಿಐ ಕೈವಾಡವಿದ್ದರೆ ಕ್ರಮ ತೆಗೆದುಕೊಳ್ಳಿ. ಸರ್ಕಾರ ಇವರದೇ ಇದೆ. ಇವರ ಬಳಿ ದಾಖಲೆಯಿದ್ದರೆ ಕ್ರಮ ತೆಗೆದುಕೊಳ್ಳಲಿ. ಇಬ್ಬಂದಿ ರಾಜಕೀಯ ಮಾಡಬೇಡಿ ಎಂದು ಹೇಳಿದರು.