ಬೆಂಗಳೂರು: ಕಾರು ಹಾಗೂ ಬಿಎಂಡಬ್ಲ್ಯು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಶೇಖ್ ನೌಶೀರ್ ಅಹಮ್ಮದ್ (34) ಮೃತಪಟ್ಟಿದ್ದಾರೆ. ಈ ಘಟನೆ ಜಯನಗರ ಅಶೋಕ ಸ್ತಂಭದ ಬಳಿ ಸಂಭವಿಸಿದೆ.
ಶೇಖ್ ನೌಶೀರ್ ಅಹಮ್ಮದ್ ಬಿಎಂಡಬ್ಲ್ಯು ಬೈಕ್ ಖರೀದಿಸಲು ಮುಂದಾಗಿದ್ದು, ಅತೀ ವೇಗದಲ್ಲಿ ಟೆಸ್ಟ್ ಡ್ರೈವ್ ಮಾಡುವ ವೇಳೆ ಈ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸಿಕೊಂಡು ಮಾಧವನ್ ಪಾರ್ಕ್ ಕಡೆಯಿಂದ ಅಶೋಕ ಸ್ತಂಭದ ಕಡೆಗೆ ಹೊರಟಿದ್ದರು. ಈ ವೇಳೆ ಅತೀ ವೇಗದಲ್ಲಿ ಬೈಕ್ ಚಲಾಯಿಸಿದ್ದರು.
‘ಕನಕಪಾಳ್ಯ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ನೌಶೀರ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮುದಾಸೀರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.