ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಎನ್.ಪಿ.ಅಮೃತೇಶ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ವಿಪಕ್ಷ ನಾಯಕನಿಲ್ಲದ ಕಾರಣಕ್ಕೆ ಹಲವು ನೇಮಕ ವಿಳಂಬವಾಗಿದೆ. ಮಾನವ ಹಕ್ಕುಗಳ ಆಯೋಗ, ಉಪಲೋಕಾಯುಕ್ತ, ಕೆಪಿಎಸ್ ಸಿ ಸೇರಿದಂತೆ ಹಲವು ನೇಮಕಗಳಾಗುತ್ತಿಲ್ಲ.
ಕಾನೂನಿನ ಪ್ರಕಾರ ಕೆಲ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲು ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ, ಮುಖ್ಯ ನ್ಯಾಯಮೂರ್ತಿಗಳ ಸಮಾಲೋಚನೆಯ ಅಗತ್ಯವಿದೆ.
ಸರ್ಕಾರ ಎಡವಿದಾಗ ಎಚ್ಚರಿಸಲು, ಜನರ ಪರವಾಗಿ ಸಮರ್ಥ ದನಿಯಾಗಲು ವಿರೋಧ ಪಕ್ಷದ ನಾಯಕನ ಅಗತ್ಯವಿದೆ. ಭಾರತದ ಪ್ರಜೆಯಾಗಿ ಮತದಾರನಾಗಿ ವಿರೋಧ ಪಕ್ಷದ ನಾಯಕನನ್ನು ನೇಮಿಸುವಂತೆ ಕೋರಿಕೊಳ್ಳುವ ಹಕ್ಕು ನನಗಿದೆ. ಹೀಗಾಗಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೇ ರಾಜ್ಯ ರಾಜಕಾರಣದ ಇತಿಹಾಸದಲ್ಲಿ 30 ವರ್ಷದಲ್ಲಿ ಇದೇ ಮೊದಲ ಬಾರಿ ವಿಪಕ್ಷ ನಾಯಕನಿಲ್ಲದೇ ವಿಧಾನಸಭೆಯಲ್ಲಿ ಕಾರ್ಯಕಲಾಪಗಳು ನಡೆದಿವೆ.