ಬೆಂಗಳೂರು: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ವ್ಯಾಗೆನಿಂಗನ್ ವಿಶ್ವವಿದ್ಯಾಲಯ, ಹಾಗೂ ಉಟ್ಟೆಕ್ಟ್ ವಿಶ್ವವಿದ್ಯಾನಿಲಯ, ನೆದರ್ಲ್ಯಾಂಡ್ ಇವರ ಸಂಯುಕ್ತಾಶ್ರಯದಲ್ಲಿ ಇಂಡೋ-ನೆದರ್ಲ್ಯಾಂಡ್ ಹವಾಮಾನ ವೈಪರಿತ್ಯ ಚತುರ ಕೃಷಿ ಪ್ರ್ರಾಯೋಜನೆ ಉದ್ಘಾಟನಾ ಸಮಾರಂಭವು ಜಿಕೆವಿಕೆ ಆವರಣದಲ್ಲಿ ನಡೆಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ:ಎಸ್.ವಿ. ಸುರೇಶ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ತಾಂತ್ರಿಕತೆಗಳ ಅನ್ವೇಷಣೆಗಿಂತ ರೈತರಿಗೆ ತಾಂತ್ರಿಕತೆಗಳ ವರ್ಗಾವಣೆ ಅತ್ಯಗತ್ಯವಾಗಿದ್ದು, ಭಾರತದಲ್ಲಿ ಕೇವಲ ಶೇ.30 ರಷ್ಟು ತಾಂತ್ರಿಕತೆಗಳು ರೈತರ ಮನೆ ಬಾಗಿಲನ್ನು ತಲುಪುತ್ತಿವೆ. ಈ ನಿಟ್ಟಿನಲ್ಲಿ ರೈತರ ಮತ್ತು ವಿಜ್ಞಾನಿಗಳ ನಡುವಿನ ತಾಂತ್ರಿಕತೆ ಸಂವಹನ ವರ್ಗಾವಣೆ ಅಂತರವನ್ನು ಕಡಿಮೆಗೊಳಿಸಲು ಈ ಪ್ರಾಯೋಜನೆಯು ಅನುಕೂಲಕರ ಎಂದು ಹೇಳಿದರು.
ರೈತರಿಗೆ ಸಮಗ್ರ ನೀರು ನಿರ್ವಹಣಾ ತಾಂತ್ರಿಕತೆಗಳು, ಬರ ಸಹಿಷ್ಟತೆಯ ತಳಿಗಳು, ಇತರೆ ಹವಾಮಾನ್ಯ ವೈಪರಿತ್ಯ ಚತುರ ತಾಂತ್ರಿಕತೆಗಳು ಪ್ರಮುಖ ಪಾತ್ರ ವಹಿಸಲಿವೆ. ಕೃಷಿಯಲ್ಲಿ ಕೃಷಿಕರ ಆದಾಯವನ್ನು ದ್ವಿಗುಣ ಗೊಳಿಸಲು ಆಧುನಿಕ ತಂತ್ರಜ್ಞಾನಗಳ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ಮಟ್ಟದ ಗುರಿಯನ್ನು ತಲುಪಬಹುದು. ಕೃಷಿ ತಾಂತ್ರಿಕತೆಗಳ ವರ್ಗಾವಣೆಯಲ್ಲಿ ಮಾಹಿತಿ ಸಂವಹನ ಅತ್ಯಂತ ಮಹತ್ವವಾಗಿದ್ದು ರೈತರಿಗೆ ಮಾಹಿತಿ ತಲುಪಿದ ನಂತರ ತಂತ್ರಜ್ಞಾನಗಳ ಅಳವಡಿಕೆ ಸಾಧ್ಯ. ತಾಂತ್ರಿಕತೆಗಳ ಅಳವಡಿಕೆ ನೆಪದಲ್ಲಿ ಭೌಗೋಳಿಕ ಪರಿಸರ ನಾಶವಾಗುವುದನ್ನು ತಪ್ಪಿಸಿ, ಸುಸ್ಥಿರ ಪದ್ಧತಿಯಲ್ಲಿ ಅಳÀವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನೆದರ್ಲ್ಯಾಂಡ್ ವ್ಯಾಗೆನಿಂಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಪ್ರೊ. ಪೌಲ್ ಸ್ಟ್ರುಯಿಕ್ ಮಾತನಾಡಿ, ಭಾರತ ಹಾಗೂ ನೆದರ್ಲ್ಯಾಂಡ್ ವೈಜ್ಞಾನಿಕ ಸಂಶೋಧನೆಗಳ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದರಿಂದ ಉಭಯದೇಶಗಳ ಬಾಂಧವ್ಯತೆ ಮತ್ತಷ್ಟು ಹೆಚ್ಚಾಗಿ ಎರಡೂ ದೇಶಗಳು ಅಭಿವೃದ್ಧಿ ಸಾಧಿಸಬಹುದು. ಎರಡು ದೇಶಗಳು ಕೃಷಿ, ವ್ಯಾಪಾರ ಮುಂತಾದ ವಿಷಯಗಳಲ್ಲಿ ಪರಸ್ಪರ ಉತ್ತಮ ಸಂಬಂಧವನ್ನು ಹೊಂದಿರುತ್ತವೆ. ಹವಾಮಾನ ವೈಪರಿತ್ಯ ಕುರಿತು ಸಂಶೋಧನೆಗಳು ಪ್ರಸ್ಥುತ ಪರಿಸ್ಥಿತಿಗೆ ಅನಿವಾರ್ಯವಾಗಿದ್ದು, ಉಭಯ ದೇಶಗಳು ಸಂಶೋಧನೆ ಕೈಗೊಂಡು ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.
ಪ್ರಧಾನ ಸಂಶೋಧಕರು ಮತ್ತು ವಿಜ್ಞಾನಿಗಳಾದ ಡಾ. ಎಂ.ಎಸ್. ಶೇಷಸಾಯಿ, ಪ್ರಾಯೋಜನೆಯ ರೂಪುರೇಷೆಗಳನ್ನು ಮಂಡಿಸಿ ಈ ಪ್ರಾಯೋಜನೆಯನ್ನು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ಧನ ಸಹಾಯದೊಂದಿಗೆ ಐದು ವರ್ಷಗಳ ಅವಧಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾನಿಲಯ, ತಮಿಳುನಾಡಿನಲ್ಲಿ ನಿರ್ವಹಿಸಲಾಗುವುದು. ಭತ್ತದ ಬೆಳೆಯನ್ನು ಕಡಿಮೆ ನೀರಿನಲ್ಲಿ ಬೆಳೆಯಲು ಸಹಕಾರವಾಗುವ ತಳಿಗಳನ್ನು ಅಭಿವೃದ್ಧಿಗೊಳಿಸುವುದು. ನೀರಿನ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಇತರೆ ಸಂಪನ್ಮೂಲಗಳನ್ನು ಸಮಗ್ರವಾಗಿ ಹಂಚಿಕೊಳ್ಳುವ ಮನಸ್ಥಿತಿಯನ್ನು ತನಿಖೆ ಮಾಡಿ ಸಮಂಜಸವಾದ ನಿರ್ದಿಷ್ಟ ಸಲಹೆಗಳನ್ನು ರೂಪಿಸುವುದು ಈ ಪ್ರಾಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಕೆ.ಬಿ. ಉಮೇಶ್, ಸಂಶೋಧನಾ ನಿರ್ದೇಶಕರು, ಡಾ. ಹೆಚ್.ಸಿ ಪ್ರಕಾಶ್,ಡೀನ್ (ಸ್ನಾತಕೋತ್ತರ), ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ನೆದರ್ಲ್ಯಾಂಡ್ ದೇಶದ ಪ್ರತಿನಿಧಿಗಳು ಮತ್ತು ಕೃಷಿ ವಿಶ್ವವಿದ್ಯಾನಿಲಯ, ತಮಿಳುನಾಡು ಹಾಗೂ ಅಂಕೂರ್ ಬೀಜ ಉತ್ಪಾದನಾ ಸಂಸ್ಥೆಯವರು ಭಾಗವಹಿಸಿದ್ದರು.