ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಒಟ್ಟೂ ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟೂ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 4,22,966 ವಿದ್ಯಾರ್ಥಿಗಳು(ಶೇ.61.88 ) ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಶೇ.68.72 ಬಾಲಕಿಯರು ಉತ್ತೀರ್ಣರಾಗುವ ಮೇಲುಗೈ ಸಾಧಿಸಿದ್ದಾರೆ. ಶೇ.55.22ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆಯ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.
2021-22ನೇ ಸಾಲಿನ ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಫಲಿತಾಶ ಪ್ರಕಟವಾಗಿದ್ದು ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (88.02) ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಜಿಲ್ಲೆ ( 86.38) ಎರಡನೇ ಸ್ಥಾನ ಪಡೆದಿದೆ.ವಿಜಯಪುರ ಮೂರನೇ ಸ್ಥಾನ, ಬೆಂಗಳೂರು ದಕ್ಷಿಣ 4, ಉತ್ತರ ಕನ್ನಡ 5 ನೇ ಸ್ಥಾನ ಗಳಿಸಿದರೆ ಶೇ 49.31 ಫಲಿತಾಂಶ ಪಡೆದಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆದಿತ್ತು. ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಲು ಇಲಾಖೆಯ ವೆಬ್ ಸೈಟ್ http://www.karresults.nic.in ಗೆ ಭೇಟಿ ನೀಡಬಹುದಾಗಿದ್ದು 12 ಗಂಟೆಯ ನಂತರ ಫಲಿತಾಂಶ ಲಭ್ಯವಾಗಲಿದೆ.