ಬೆಂಗಳೂರು: ರಾಜ್ಯದಲ್ಲಿ ಇದೀಗ ಎಲ್ಲಾ ಕಡೆ ಹುಲಿ ಚರ್ಮ, ಹುಲಿ ಉಗುರಿನದ್ದೇ ಸುದ್ದಿ. ದಿನಕ್ಕೊಬ್ಬರು ಸಿನಿಮಾ ನಟರು, ಧರ್ಮ ಗುರುಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಇದೀಗ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬಂದಿಗಳು ಅಕ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಹುಲಿ ಚರ್ಮದ ಮೇಲೆ ಕುಳಿತಿರುವ ಅವಧೂತ ವಿನಯ್ ಗುರೂಜಿಯವರ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೊಪ್ಪ ಡಿಎಫ್ ನಂದೀಶ್ ಅವರ ನೇತೃತ್ವದ ಮೂವರು ಅಧಿಕಾರಿಗಳ ತಂಡ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ವಿನಯ್ ಗುರೂಜಿ ಅವರಿಂದ ಹೇಳಿಕೆ ಪಡೆದುಕೊಂಡರು. ವಿನಯ್ ಗುರೂಜಿ ಮಾತನಾಡಿ, ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ನನ್ನ ಬಳಿ ಮಾತನಾಡಿದ್ದು, ಎಲ್ಲಾ ದಾಖಲೆ ನೀಡಿದ್ದೇನೆ, ಮಾಹಿತಿ ಕೇಳಿದ್ದಾರೆ ನಮ್ಮ ಬಳಿ ಇದ್ದ ಎಲ್ಲಾ ದಾಖಲೆ ಗಳನ್ನು ನೀಡಿದ್ದೇನೆ ಎಂದರು.
‘ಬೆಂಗಳೂರಿನ ಕೇಂದ್ರ ಕಚೇರಿಯಿಂದ ಆಶ್ರಮದಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಸ್ಥಳ ಮಹಜರು ಮಾಡಿದ್ದೇವೆ. ವಿನಯ್ ಗುರೂಜಿ ಅವರಿಂದ ಹುಲಿ ಚರ್ಮದ ವಿಚಾರ ಮಾಹಿತಿ ಪಡೆದುಕೊಂಡಿದ್ದೇವೆ. ಎರಡು ವರ್ಷದ ಹಿಂದಿನ ಫೋಟೋ ಎಂದು ಹೇಳಿದ್ದು, ಯಾರು ಕೊಟ್ಟಿದ್ದು ಎಂಬ ಮಾಹಿತಿಯನ್ನು ನೀಡಿದ್ದಾರೆ, ಪರಿಶೀಲನೆ ನಡೆಸಿದ್ದು ಹಿರಿಯ ಅಧಿಕಾರಿ ಗಳಿಗೆ ಮಾಹಿತಿ ನೀಡುತ್ತೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.