ಬೆಂಗಳೂರು, ಮಾ.22: ಕಳೆದ 15 ವರ್ಷಗಳಿಂದ ಬೆಂಗಳೂರು ನಗರದ ಆಡಳಿತ ನಡೆಸಿದ ಎರಡೂ ರಾಷ್ಟ್ರೀಯ ಪಕ್ಷಗಳು ಬಿಬಿಎಂಪಿಯನ್ನ ಎಟಿಎಂ ಮಾಡಿಕೊಂಡಿದ್ದು, ಲೂಟಿ ಮಾಡಿದ ಹಣದಲ್ಲಿ ಕುಕ್ಕರ್ ಮತ್ತು ಸೀರೆಯನ್ನ ಹಂಚುತ್ತಿವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಇಂದು ಬೆಂಗಳೂರಿನ ಹೆಬ್ಬಾಳದಲ್ಲಿ ಮೊಳಗಿತು ಜಾತ್ಯತೀತ ಜನತಾ ದಳದ (JDS)) ಚುನಾವಣಾ ರಣ ಕಹಳೆ ಪಂಚರತ್ನ ರಥ ಯಾತ್ರೆಯಲ್ಲಿ ಭಾಗವಹಿಸಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ ಸಯ್ಯದ್ ಮೋಹಿದ್ ಅಲ್ತಾಫ್ ಅವರ ಪರವಾಗಿ ಮತಯಾಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ನಡೆಸುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಇದರಿಂದ ಕಾರ್ನರ್ ಮೀಟಿಂಗ್ ಮಾಡಿ ಎಂದು ಸಲಹೆ ಕೊಟ್ಟಿದ್ದೇನೆ. ಬೇರೆ ಕಡೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎಂದು ಈ ಸಲಹೆ ಕೊಟ್ಟಿದ್ದೆ. ಇಲ್ಲಿ ದೊಡ್ಡ ಮಟ್ಟದ ರಥಯಾತ್ರೆ ನಡೆದಿಲ್ಲದೇ ಇದ್ದರೂ ನಮಗೆ ತೃಪ್ತಿ ಇದೆ. ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ ಸಯ್ಯದ್ ಮೋಹಿದ್ ಅಲ್ತಾಫ್ ಅವರ ಪರವಾಗಿ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪರವಾಗಿ ಒಳ್ಳೆಯ ವಾತಾವರಣವಿದೆ. ಹೆಬ್ಬಾಳ ಕ್ಷೇತ್ರ ಜೆಡಿಎಸ್ ಗೆಲುವಿನ ಹೆಬ್ಬಾಗಿಲು ಆಗಲಿದೆ ಎಂದು ಹೇಳಿದರು.
ಅಭಿವೃದ್ದಿ ಬಗ್ಗೆ ಬಿಜೆಪಿ ಯವರಿಗೆ ಚರ್ಚೆ ಮಾಡೋಕೆ ಏನೂ ಇಲ್ಲ. ಇದರಿಂದ ಇಂತಹ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ನಂತಹ ವಿಷಯಗಳನ್ನು ಮುಂದಕ್ಕೆ ತರುತ್ತಿದ್ದಾರೆ. ಚುನಾವಣೆ ಸಂಧರ್ಭದಲ್ಲಿ ಇದನ್ನು ಮುನ್ನೆಲೆಗೆ ತಂದಿರುವ ಅವರುಗಳು ಪ್ರತಿದಿನ ಇದರ ಬಗ್ಗೆ ಏಕೆ ಚರ್ಚೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರು ನಗರದ ರಸ್ತೆಗಳ ದುರವಸ್ಥೆ ಮತ್ತು ಕಸದ ಅಸಮರ್ಪಕ ನಿರ್ವಹಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ನಗರವನ್ನ ಎರಡೂ ರಾಷ್ಟ್ರೀಯ ಪಕ್ಷಗಳು ಎಟಿಎಂ ಮಾಡಿಕೊಂಡಿವೆ. ಕಳೆದ 15 ವರ್ಷಗಳಿಂದ ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವುದು ಈ ಎರಡೂ ಪಕ್ಷಗಳೇ. ಎಟಿಎಂ ಆಗಿ ಬಿಬಿಎಂಪಿಯನ್ನ ಬಳಸಿಕೊಂಡ ಒಳ್ಳೆಯ ಆದಾಯದ ಗಳಿಕೆಯನ್ನ ಎರಡೂ ಪಕ್ಷಗಳು ಮಾಡಿದ್ದು, ಈ ಹಣವನ್ನೇ ಉಪಯೋಗಿಸಿ ಕುಕ್ಕರ್ ಮತ್ತು ಸೀರೆಯನ್ನು ಹಂಚುತ್ತಿದ್ದಾರೆ. ಮತವನ್ನು ಪಡೆಯುವದಕ್ಕೆ ಎಟಿಎಂ ಹಣವನ್ನು ಚೆನ್ನಾಗಿ ಉಪಯೋಗಿಸುತ್ತಿದ್ದಾರೆ. ರಾಜ್ಯದಲ್ಲಿ ಸ್ಟಾಚ್ಯೂ ರಾಜಕಾರಣವೂ ನಡಿಯುತ್ತಿದೆ. ಉರಿಗೌಡ ನಂಜೇಗೌಡ ಎಂದೂ ಹೆಳ್ತಾ ಇದ್ದಾರೆ. ಬಿಜೆಪಿ ಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ಹೆಬ್ಬಾಳ ಕ್ಷೇತ್ರಕ್ಕೆ ಜೆಡಿಎಸ್ ವಿದ್ಯಾವಂತ, ಪ್ರಾಮಾಣಿಕ ಒಳ್ಳೆ ದೂರ ದೃಷ್ಟಿವುಳ್ಳ ಯುವ ನಾಯಕನನ್ನು ಕಣಕ್ಕಿಳಿಸಿದೆ. ನಿಮಗೆ ಅಭಿವೃದ್ಧಿ ಬೇಕಾ ಅಥವಾ ಬರೀ ಕುಕ್ಕರ್, ಸೀರೆ ಕೊಟ್ಟು ತೃಪ್ತಿ ಪಡಿಸೋ ನಾಯಕರು ಬೇಕೋ ಅನ್ನೋದನ್ನು ಹೆಬ್ಬಾಳದ ಜನತೆ ನಿರ್ಧರಿಸಿಬೇಕು. ಈ ಬಾರಿ ಡಾ. ಸಯ್ಯದ್ ಮೋಹಿದ್ ಅಲ್ತಾಫ್ ಅವರನ್ನು ಗೆಲ್ಲಿಸಿ ನನಗೆ ಇನ್ನಷ್ಟು ಶಕ್ತಿ ತುಂಬಿಸಿ ಎಂದು ಕುಮಾರ ಸ್ವಾಮಿ ಜನತೆಯಲ್ಲಿ ಮನವಿ ಮಾಡಿದ್ರು.
ಪಂಚರಥಯಾತ್ರೆ ಸಮಾರೋಪ ರೋಡ್ ಕಿಮೀ ರಸ್ತೆ ಶೋ:
ಮೈಸೂರಿನಲ್ಲಿ ನಡೆಯಲಿರುವ ಪಂಚರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ರೋಡ್ ಶೋ ನಡೆಸಲು ಚಿಂತಿಸಿದ್ದೇವೆ. ಆದರೆ, ಅದಕ್ಕೆ ವೈದ್ಯರ ಅನುಮತಿ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ, ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ ಸಯ್ಯದ್ ಮೋಹಿದ್ ಅಲ್ತಾಫ್, ಜೆಡಿಎಸ್ನ ರಾಷ್ಟ್ರಿಯ ಉಪಾಧ್ಯಕ್ಷರಾದ ಉಬೇದುಲ್ಲಾ ಖಾನ್ ಆಜ್ಮಿ ಇನ್ನಿತ ಜೆಡಿಎಸ್ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.