ಬೆಂಗಳೂರು: ಕಾವೇರಿ ಜಲವಿವಾದ ರಾಜ್ಯಸರ್ಕಾರಕ್ಕೆ ಬಿಸಿತುಪ್ಪವಾಗಿದೆ. ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸೆ.22 ರಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.
ಈ ಸಭೆಯಲ್ಲಿ ಕಾನೂನು ತಜ್ಞರು ತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್ ನೀರು ಬಿಡಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾನೂನು ತಜ್ಞರು ಸಭೆಯಲ್ಲಿ ಎಲ್ಲ ಕಾನೂನು ವಿವರ ನೀಡಿದ್ದಾರೆ. 5000 ಕ್ಯೂಸೆಕ್ ಬಿಡಲು ಹೇಳಿದ್ದಾರೆ, 7000 ಕ್ಯೂಸೆಕ್ ಒಳಹರಿವು ಇದೆ. ಸಾಮಾನ್ಯವಾಗಿ 2500ರಿಂದ 3000 ಕ್ಯೂಸೆಕ್ ನೀರು ಹರಿ ಬಿಡುತ್ತಿದ್ದೇವೆ ಎಂದರು.
ನಾವು ಇದುವರೆಗೆ ಎಲ್ಲ ರೈತರ ಹಿತವನ್ನೂ ಕಾಪಾಡಿದ್ದೇವೆ. ಕುಡಿಯುವ ನೀರಿನ ವಿಚಾರದಲ್ಲೂ ನಾವು ರಕ್ಷಣೆ ಮಾಡುತ್ತೇವೆ. ರಾಜಕಾರಣ ಮಾಡುವವರು ಮಾಡುತ್ತಲೇ ಇರಲಿ. ಮೇಕೆದಾಟು ವಿಚಾರವೂ ಕೋರ್ಟ್ ಪ್ರೊಸಿಡಿಂಗ್ಸ್ನಲ್ಲಿ ಪ್ರಸ್ತಾಪ ಆಗಿದೆ. 177 ಟಿಎಂಸಿ ನೀರು ಕೊಟ್ಟೇ ಕೊಡುತ್ತಾರೆ. ಮೇಕೆದಾಟು ಡ್ಯಾಂ ಕಟ್ಟಲಿ ಅಂತಾ ನ್ಯಾಯಮೂರ್ತಿಗಳು ಹೇಳಿದ್ದಾರೆ. ಮೇಕೆದಾಟು ಡ್ಯಾಂಗೆ ಸಂಬಂಧಿಸಿದಂತೆ ಮುಂದಿನ ಪ್ರಸ್ತಾವನೆ ಸಲ್ಲಿಸುತ್ತೇವೆ. ಡಿಪಿಆರ್ ಹಾಗೂ ಪರಿಸರ ಕ್ಲಿಯರೆನ್ಸ್ಗೆ ಪ್ರಕ್ರಿಯೆ ಮುಂದುವರಿಸುತ್ತೇವೆ ಎಂದರು.
ಸುಪ್ರೀಂಕೋರ್ಟ್ ನಿತ್ಯ 5 ಸಾವಿರ ಕ್ಯೂಸೆಕ್ನಂತೆ ಕಾವೇರಿ ನೀರು ಹರಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರೂ ಪ್ರಸ್ತುತ ಬಿಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ, ಇದಕ್ಕೂ ಮೊದಲು ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆದು ಮಾತುಕತೆ ನಡೆಸಬೇಕು.ನ್ಯಾಯಾಧೀರು ಪಾತ್ರವಹಿಸಿ ವಿವಾದವನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದರು.