ಬೆಂಗಳೂರು: ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ರಂಗಕರ್ಮಿ, ಚಿತ್ರನಟ ಮೈಸೂರು ರಮಾನಂದ ಅವರ ಪುತ್ರನ ಚಿಕಿತ್ಸೆಗೆ ಕಲಾ ಬಂಧು ಫೌಂಡೇಶನ್ ಸಹಾಯ ಹಸ್ತ ನೀಡಿದೆ.
ಸಾಮಾನ್ಯವಾಗಿ ನಟರು ಅಂದರೆ ಶ್ರೀಮಂತರು ಎಂಬ ತಪ್ಪು ಕಲ್ಪನೆಯಿದೆ. ಆದರೆ ಬಹಳಷ್ಟು ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಅದರಂತೆ ಪೋಷಕ ನಟರಾಗಿರುವ ರಮಾನಂದ ಅವರ ಬದುಕು ಇದಕ್ಕೆ ಭಿನ್ನವಾಗಿಲ್ಲ. ಈ ನಡುವೆ ಗಾಯದ ಮೇಲೆ ಬರೆ ಎಂಬಂತೆ ಅವರ ಪುತ್ರರಾದ ಅಮಿತಾನಂದ ಹಾಗೂ ಹರ್ಷಿತಾನಂದ ಅವರು ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆಗೆ ಹಣ ಹೊಂದಿಸುವುದೇ ಕುಟುಂಬಕ್ಕೆ ಸವಾಲ್ ಆಗಿದೆ. ಹೀಗಾಗಿ ಅವರ ಕಷ್ಟವನ್ನು ತಿಳಿದು ಕೆಲವರು ಸಹಾಯ ಮಾಡಲು ಮುಂದಾಗಿದ್ದು ಅದರಂತೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೋಷಕ ನಟ ರಮಾನಂದ ಅವರ ಪುತ್ರರ ವೈದ್ಯಕೀಯ ವೆಚ್ಚಕ್ಕಾಗಿ ಕಲಾ ಬಂಧು ಫೌಂಡೇಶನ್ ವತಿಯಿಂದ ಅಧ್ಯಕ್ಷ ನರಸಿಂಹರಾಜು 10 ಸಾವಿರ ರೂ. ನೆರವಿನ ಚೆಕ್ಕನ್ನು ನೀಡಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಸಹೃದಯಿಗಳು ಮನಸ್ಸು ಮಾಡಿ ತಮ್ಮ ಕೈಲಾದ ಸಹಾಯ ಮಾಡಿದರೆ ನಟನೊಬ್ಬನ ಕುಟುಂಬ ನೆಮ್ಮದಿಯುಸಿರು ಬಿಡಲು ಸಾಧ್ಯವಾಗಬಹುದೇನೋ?.