ಬೆಂಗಳೂರು: ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿ ಕೊಡಗು ಜಿಲ್ಲೆಯಲ್ಲಿ ೨ ದಿನ ವಾಸ್ತವ್ಯ ಹೂಡಲಿದ್ದು, ಈ ಕಾರಣದಿಂದ ಅ.೪ ಮತ್ತು ಅ.೫ರಂದು ಭಾರತ್ ಜೋಡೋ (Bharat Jodo) ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಅ.೬ರಂದು ಮುಂದುವರಿಯಲಿದೆ. ಅಂದು ಸೋನಿಯಾ ಗಾಂಧಿ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ಮಡಕೇರಿಯಲ್ಲಿ ಎರಡು ದಿನಗಳ ಕಾಲ ಕುಟುಂಬದ ಜತೆಗೆ ಸಮಯ ಕಳೆಯಲಿದ್ದಾರೆ. ಹೀಗಾಗಿ ಎರಡು ದಿನಗಳ ಕಾಲ ಪಾದಯಾತ್ರೆ ಇರುವುದಿಲ್ಲ. ಅವರು ಈ ಎರಡು ದಿನ ಕೊಡಗಿನಲ್ಲಿ ವಾಸ್ತವ್ಯ ಹೂಡಲಿದ್ದು, ಅ.೬ರಂದು ನಡೆಯುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಗೆ ಯುವ ಜನರು ಸೇರಿದಂತೆ ಅಪಾರ ಜನರ ಬೆಂಬಲ ಇದೆ ಎಂದು ತಿಳಿಸಿದರು.
ಇಡಿ ಪ್ರಕರಣ ಸಂಬಂಧ ಅ.7ರಂದು ಹಾಜರಾಗುವಂತೆ ನನಗೆ ಸಮನ್ಸ್ ಬಂದಿದೆ. ಸಮಯಾವಕಾಶ ನೀಡುವಂತೆ ನಾನು ಹಾಗೂ ಸುರೇಶ್ ಇಬ್ಬರೂ ಇಡಿಯವರನ್ನು ಕೋರಿಕೊಂಡಿದ್ದೇವೆ ಎಂದು ಡಿಕೆಶಿ ಹೇಳಿದರು.
ನಮ್ಮ ಬಗ್ಗೆ ಬಿಜೆಪಿಯವರಿಗೆ ಏಕೆ ಅಷ್ಟು ಕಾಳಜಿ? ಪಾಪ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಣ್ಣಿರು ಹಾಕಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರು ಸೇರಿ ಯಾರೇ ಅಪಹಾಸ್ಯ ಮಾಡಿದರೂ ಪಾದಯಾತ್ರೆಯು ನದಿಯ ಹರಿವಿನ ರೀತಿಯಲ್ಲಿ ನಿರಾತಂಕವಾಗಿ ಸಾಗಿದೆ. ಮುಂದೆಯೂ ಸಾಗುತ್ತದೆ ಎಂದು ಡಿಕೆಶಿ ಹೇಳಿದರು.