ಬೆಂಗಳೂರು: ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಇಂದಿನದ್ದು ಅಲ್ಲ, ಈ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆ ಪದ್ಧತಿಯನ್ನು ನಿಲ್ಲಿಸೋದಿಲ್ಲ. ಹೊಸ ಬೇಡಿಕೆ ಇಡುವ ಧಾರ್ಮಿಕ ಆಚರಣೆಗೆ ಅನುಮತಿಯನ್ನು ನೀಡೋದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವುದಾದರೆ ಬೇರೆ ಧರ್ಮಗಳ ಧಾರ್ಮಿಕ ಆಚರಣೆಗೂ ಅವಕಾಶ ನೀಡಬೇಕೆಂದು ಕೆಲ ಸಂಘಟನೆಗಳು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಈ ಹಬ್ಬದ ಆಚರಣೆಯನ್ನು ಬಾಲಗಂಗಾಧರ ತಿಲಕ್ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರನ್ನು ಒಗ್ಗೂಡಿಸುವ ಸಲುವಾಗಿ ಆರಂಭಿಸಲಾಗಿದ್ದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಾಮೂಹಿಕವಾಗಿ ಪೂಜಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಇದರ ಫಲವಾಗಿಯೇ ಹಿಂದೂಗಳು ಮಾತ್ರವಲ್ಲ ಬೇರೆ ಬೇರೆ ಧರ್ಮೀಯರೂ ಒಟ್ಟಾಗಿ ಸೇರಿ ಗಣೇಶೋತ್ಸವ ಆಚರಿಸುವ ಪದ್ಧತಿಯಿದೆ. ಅದನ್ನು ಮುಂದುವರಿಸಿಕೊಂಡು ಹೋಗಲು ಯಾವುದೇ ಸಮಸ್ಯೆ ಇಲ್ಲ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲಾಗಲಿ, ನಾನು ಶಿಕ್ಷಣ ಸಚಿವನಾದ ಮೇಲಾಗಲಿ ಜಾರಿ ಮಾಡಿದ್ದಲ್ಲ. ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಅನೇಕ ಪದ್ಧತಿ, ಆಚರಣೆಗಳು ನಡೆದು ಬಂದಿವೆ. ಮುಂದೆಯೂ ನಡೆದುಕೊಂಡು ಹೋಗುತ್ತವೆ. ಈಗ ಯಾರೋ ಕೇಳುತ್ತಿದ್ದಾರೆ ಎಂದು ಆಚರಣೆ ಬಿಡೋಕೆ ಆಗಲ್ಲ. ನಾವು ಅದನ್ನು ಆರಂಭಿಸಿಯೂ ಇಲ್ಲ, ಮುಕ್ತಾಯ ಮಾಡುವರೂ ಅಲ್ಲ. ಅದು ನಿರಂತರವಾಗಿ ನಡೆಯುತ್ತದೆ ಎಂದರು.