ಬೆಂಗಳೂರು: ಮಳೆಯ ಅಬ್ಬರದಿಂದ ಬೆಂಗಳೂರಿನ ರಸ್ತೆಗಳಲ್ಲಿ ಮಳೆನೀರು ನದಿಯಂತೆ ತುಂಬಿ ಹರಿಯುತ್ತಿವೆ. ಸಾವಿರಾರು ವಾಹನಗಳು ನೀರಿನಲ್ಲಿ ಮುಳುಗಿವೆ. ಬೆಂಗಳೂರಿನ ಬೆಳ್ಳಂದೂರು, ಸರ್ಜಾಪುರ, ವೈಟ್ಫೀಲ್ಡ್ ರಸ್ತೆಗಳು ಪ್ರವಾಹದ ನೀರಿನಿಂದ ಆವೃತವಾಗಿವೆ. ಬೆಂಗಳೂರು ಅಕ್ಷರಶಃ ಕೆರೆಯಂತಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯ ದಿನವಾದ ಇಂದು ಭಾರೀ ಮಳೆಯಾಗಲಿದ್ದು, ಸೆ. 2ರವರೆಗೂ ಮಳೆ ಮುಂದುವರೆಯಲಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ 3 ದಿನಗಳ ಕಾಲ ಕರ್ನಾಟಕದಲ್ಲಿ ನಿರಂತರ ಮಳೆಯಾಗಲಿದ್ದು, ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕಳೆದ ಎರಡು ದಿನಗಳಿಂದ ಅನೇಕ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ಭಾರೀ ಮಳೆಯಿಂದಾಗಿ ರಜೆ ಘೋಷಿಸಲಾಗಿದೆ.