ಬೆಂಗಳೂರು: ಕಾವೇರಿ ಸಮಸ್ಯೆ ಮತ್ತೆ ಭುಗಿಲೆದ್ದಿದ್ದು, ಸುಪ್ರೀಂಕೋರ್ಟ್ ಆದೇಶದನ್ವಯ ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡಬೇಕಿದೆ. ಈ ಬಗ್ಗೆ ಸ್ಪಷ್ಟ ನಿಲುವಿಗೆ ಸರ್ಕಾರ ಇನ್ನಷ್ಟೆ ಬರಬೇಕಿದೆ. ಇದರ ನಡುವೆ ರೈತರು, ಕನ್ನಡ ಪರ ಸಂಘಟನೆಗಳು ಇನ್ನಿತರೆ ಕೆಲವು ಸಂಘಟನೆಗಳು ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು ಮಂಗಳವಾರ (ಸೆಪ್ಟೆಂಬರ್ 24) ಬಂದ್ಗೆ ಕರೆ ನೀಡಿವೆ. ಬಂದ್ಗೆ ಹಲವು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಿವೆ.
ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದು, ಬಂದ್ಗೆ ಆಟೋ-ಟ್ಯಾಕ್ಸಿ, ಚಾಲಕರು, ಐಟಿ-ಬಿಟಿ ಒಕ್ಕೂಟ ಇನ್ನೂ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ. ಇದರ ನಡುವೆ ಕನ್ನಡ ಕಿರುತೆರೆ ವಲಯವೂ ಸಹ ಮಂಗಳವಾರದ ಬೆಂಗಳೂರು ಬಂದ್ಗೆ ಬೆಂಬಲ ನೀಡಿದೆ. ಅಲ್ಲದೆ ಮಂಗಳವಾರದಂದು ಕಿರುತೆರೆಗೆ ಸಂಬಂಧಿಸಿದ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಎಂದಿದ್ದಾರೆ ಸಂಘದ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ಹೇಳಿದ್ದಾರೆ.
ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಬಂದ್ ಮಾಡುವ ಜೊತೆಗೆ ಬಂದ್ ದಿನದಂದು ನಿಗದಿ ಪಡಿಸಿದ ಸ್ಥಳಕ್ಕೆ ಹಾಜರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಹ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘಟನೆ ತನ್ನ ಸದಸ್ಯರು ಹಾಗೂ ಪದಾಧಿಕಾರಿಗಳ ಬಳಿ ಮನವಿ ಮಾಡಿದೆ.
ಇನ್ನು ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಈ ಬೆಂಗಳೂರು ಬಂದ್ ನಡೆಯುತ್ತಿದೆ. ಆಟೋ-ಟ್ಯಾಕ್ಸಿ, ಖಾಸಗಿ ಬಸ್, ಲಾರಿ, ಕಾರ್ಮಿಕ ಸಂಘಟನೆ, ಐಟಿ-ಬಿಟಿ, ಹೋಟೆಲ್-ಕಾಂಡಿಮೆಂಟ್ಸ್, ಇನ್ನೂ ಹಲವು ಸಂಘಟನೆಗಳು ಬೆಂಬಲ ನೀಡಿವೆ.