ಬೆಂಗಳೂರು; ವಿಶ್ವೇಶ್ವರಪುರಂನಲ್ಲಿ ಜ.8ರಂದು ಉದಯಪುರದ ನಾರಾಯಣ್ ಸೇವಾ ಸಂಸ್ಥಾನ್ ಕುಟುಂಬ ಮತ್ತು ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾದಿಂದ ಉಚಿತವಾಗಿ ಅತ್ಯಾಧುನಿಕ ಬೃಹತ್ ಅಂಗಾಂಗ ಜೋಡಣಾ ಶಿಬಿರ ಆಯೋಜಿಸಲಾಗಿದೆ.
ಅಪಘಾತ ಮತ್ತಿತರ ಕಾರಣಗಳಿಗಾಗಿ ಅಂಗಾಂಗಳನ್ನು ಕಳೆದುಕೊಂಡಿರುವ ಹಾಗೂ ಜನ್ಮತಃ ಸಮಸ್ಯೆಯುಳ್ಳ ದಿವ್ಯಾಂಗರಿಗಾಗಿ ಬೃಹತ್ ಸಮಾವೇಶ ಆಯೋಜಿಸಿದ್ದು, ಅಗತ್ಯವಿರುವವರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಾರಾಯಣ್ ಸೇವಾ ಸಂಸ್ಥಾನ್ ಕುಟುಂಬದ ಮುಖ್ಯಸ್ಥ ಕುಂಬಿಲಾಲ್ ಮೆನೇರಿಯಾ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರ ಪುರಂನ ಮಿನರ್ವಾ ಸರ್ಕಲ್ ಬಳಿ ಇರುವ ಬಿ. ಅರಸೋಜಿ ರಾವ್ ಕಲ್ಯಾಣ ಮಂಟಪದಲ್ಲಿ ಬೃಹತ್ ಶಿಬಿರವನ್ನು ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಉದ್ಘಾಟಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹುಟ್ಟಿನಿಂದಲೇ ಸಮಸ್ಯೆ ಇರುವವರನ್ನು ಪತ್ತೆ ಮಾಡಿ ರಾಜಸ್ಥಾನದ ಉದಯಪುರದಲ್ಲಿ ಶಸ್ತ್ರಚಿಕತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿರಲಿದೆ ಹೆಚ್ಚಿನ ಮಾಹಿತಿಗೆ- 9341200200 ಸಂಪರ್ಕಿಸಬಹುದು. ಚಿಕಿತ್ಸೆಗೆ ಬರುವವರು ಆಧಾರ್, ದಿವ್ಯಾಂಗ ಪ್ರಮಾಣ ಪತ್ರದ ಎರಡು ನಕಲು ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಹೇಳಿದರು.