ಬೆಂಗಳೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ (ಹರ್ ದಿನ ಹರ್ ಗರ್ ಆಯುರ್ವೇದ) ಕಾರ್ಯಕ್ರಮದ ಅಂಗವಾಗಿ ರಾಜಭವನದಲ್ಲಿ ಆಯೋಜಿಸಲಾಗಿದ್ದ ಆಯುರ್ವೇದ ವೈದ್ಯಕೀಯ ಶಿಬಿರಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಆಯುರ್ವೇದವನ್ನು ಅತ್ಯುತ್ತಮ ಮತ್ತು ಪುರಾತನವಾದ ವೈದ್ಯಕೀಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ, ಇದು ಇಂದಿಗೂ ಪ್ರಸ್ತುತವಾಗಿದೆ. ಆಯುರ್ವೇದದ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ಪ್ರಯೋಜನಗಳನ್ನು ತಳಮಟ್ಟದವರೆಗೆ ಕೊಂಡೊಯ್ಯಲು, ಭಾರತ ಸರ್ಕಾರದ ಆಯುಷ್ ಸಚಿವಾಲಯವು 2016 ರಿಂದ ಧನ್ವಂತರಿ ಜಯಂತಿ (ಧಂತೇರಸ್) ಸಂದರ್ಭದಲ್ಲಿ ಪ್ರತಿ ವರ್ಷ ಆಯುರ್ವೇದ ದಿನವನ್ನು ಆಚರಿಸುತ್ತಿದೆ ಎಂದರು.
ಆಯುಷ್ ಸಚಿವಾಲಯವು ಆಯುರ್ವೇದ ದಿನವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಈ ವರ್ಷದ ಥೀಮ್ ‘ಹರ್ ದಿನ್ ಹರ್ ಘರ್ ಆಯುರ್ವೇದ’ (ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ) ಆಗಿದೆ. ಆಯುರ್ವೇದ ದಿನದ ನಿಮಿತ್ತ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಯುರ್ವೇದ ಆಸ್ಪತ್ರೆ, ಬೆಂಗಳೂರು ರವರು ರಾಜಭವನದಲ್ಲಿ ಆಯೋಜಿಸಿರುವುದು ಸಂತಸ ತಂದಿದೆ.
ಸಂಘಟಕರು ಮಾಡುತ್ತಿರುವ ಉತ್ತಮ ಕಾರ್ಯಗಳಿಗಾಗಿ ಅವರನ್ನು ಅಭಿನಂದಿಸುತ್ತೇನೆ ಮತ್ತು ‘ಹರ್ ದಿನ್ ಹರ್ ಘರ್ ಆಯುರ್ವೇದ’ ವಿಷಯವನ್ನು ಅರ್ಥಪೂರ್ಣವಾಗಿಸುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ನೀಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಶಿಬಿರದಲ್ಲಿ ರಾಜಭವನದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಯುರ್ವೇದ ಮಹತ್ವದ ಮಾಹಿತಿ ನೀಡಿದ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿ, ಆಯುರ್ವೇದ ಔಷಧಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆರ್ಯುವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಹಲ್ಯ.ಎಸ್, ಉಪ ಪ್ರಾಂಶುಪಾಲರಾದ ಡಾ.ಸುರೇಖ, ಆರ್ ಎಂ ಓ ಡಾ.ವೆಂಕಟರಾಮಯ್ಯ, ಹಿರಿಯ ವೈದ್ಯಾಧಿಕಾರಿ ಡಾ.ವೀಣಾ ಕೃಷ್ಣಮೂರ್ತಿ, ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ಫಾರ್ಮಸಿ ಅಧಿಕಾರಿ ಯೋಗೇಶ್ ಪಿ ಎಂ, ಭಾರತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.