ತುಮಕೂರು: ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಅಭಿವೃದ್ದಿ ಮಾಡದೇ ಆಳವಾಗಿ ಬೇರೂರಿರುವ ಈಗ ಒಣಗಿರುವ ಮರವನ್ನು ಬುಡ ಸಮೇತ ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ತನ್ನ ಬೆಂಬಲಿಗರಿಗೆ ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾರ್ಮಿಕವಾಗಿ ಕರೆ ನೀಡಿದರು.
ಗುಬ್ಬಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಹೊನ್ನಗಿರಿಗೌಡ ಬೆಂಬಲಿತ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಪಡೆ ಜೆಡಿಎಸ್ ಪಕ್ಷ ಸೇರಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಪಕ್ಷಗಳಿಂದ ನನಗೆ ಬೆಟ್ಟಸ್ವಾಮಿ ಅವರಿಗೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಒಟ್ಟಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಪಕ್ಷ ಸೇರ್ಪಡೆಯಾಗಿ ಅಭ್ಯರ್ಥಿ ನಾಗರಾಜು ಗೆಲುವಿಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಎಲ್ಲಾ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಕಾಂಗ್ರೆಸಿಗರು ಮೂಲ ಪಕ್ಷವನ್ನು ತೊರೆದಿದ್ದ ಕಾರಣ ಕಾಂಗ್ರೆಸ್ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಮಾತನಾಡಿ ಕುತಂತ್ರಗಳಿಂದ ರಾಷ್ಟ್ರೀಯ ಪಕ್ಷ ಬಿಟ್ಟ ನಮಗೆ ಆಗಿರುವ ಅನ್ಯಾಯ ತಿಳಿದಿದೆ. ಜೆಡಿಎಸ್ ಸೇರಿದ ನಮ್ಮೆಲ್ಲ ಬೆಂಬಲಿಗರು ಒಬ್ಬೊಬ್ಬ ನಾಗರಾಜು ಆಗಿ ದುಡಿಯಬೇಕು. ಕುಮಾರಣ್ಣ ಅವರನ್ನು ಮತ್ತೊಮ್ಮೆ ಸಿಎಂ ಮಾಡಲು ಇಲ್ಲಿ ಜೆಡಿಎಸ್ ನಾಗರಾಜು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ ಜೆಡಿಎಸ್ ನಲ್ಲೇ ಬೆಳೆದು ಏನೆಲ್ಲಾ ಅನುಭವಿಸಿ ಮಾಜಿ ಸಿಎಂ ಕುಮಾರಣ್ಣ ಅವರನ್ನು ನಿಂದಿಸಿ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕರು ಹನ್ನೆರೆಡು ಸಾವಿರದ ಗೂಡು ಎಂದು ಜರಿದಿದ್ದಾರೆ. ಈಗ ಅದೇ ಹನ್ನೆರೆಡು ಸಾವಿರದ ಹೊಡೆತಕ್ಕೆ ಸಿಲುಕಲಿದ್ದಾರೆ. ಹೊನ್ನಗಿರಿಗೌಡ ಅವರ ಬೆಂಬಲಿಗರು ಜೆಡಿಎಸ್ ಪರ ಬಂದಿದ್ದು ಅನೆ ಬಲ ಬಂದಂತಾಗಿದೆ ಎಂದ ಅವರು ಕುಮಾರಣ್ಣ ಅವರ ಪಂಚರತ್ನ ಯೋಜನೆ ಸಾಕಾರಕ್ಕೆ ಗ್ರಾಮೀಣ ಜನರು ಜೆಡಿಎಸ್ ಪರ ನಿಲ್ಲುತ್ತಾರೆ. ಸಾಲ ಮನ್ನಾ ಘೋಷಣೆ ಲಾಭ ಪಡೆದ ಹದಿನಾರು ಸಾವಿರ ರೈತರು ನಮ್ಮಲ್ಲಿದ್ದಾರೆ. ಇವರೆಲ್ಲರ ಆಶೀರ್ವಾದ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಹಿಂದುಳಿದ ವರ್ಗಗಳ ಆಯೋಗ ಮಾಜಿ ಸದಸ್ಯ ಯೋಗಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡ ಎಸ್.ಎಲ್.ನರಸಿಂಹಯ್ಯ, ಎಚ್.ಡಿ.ಯಲ್ಲಪ್ಪ, ಮಡೇನಹಳ್ಳಿ ದೊಡ್ಡಯ್ಯ, ಅಮ್ಮನಘಟ್ಟ ಶಿವಣ್ಣ, ಪಾಪಣ್ಣ, ಕೊಪ್ಪ ರಾಜಣ್ಣ, ಬೃಂದಾ, ಜಿ.ಎಸ್.ಮಂಜುನಾಥ್, ಗೋವಿಂದಪ್ಪ ಇತರರು ಇದ್ದರು.