ಬೆಂಗಳೂರು: ರಾಜ್ಯದ ಮೂವತ್ತೆಂಟು ಸಕ್ಕರೆ ಕಾರ್ಖಾನೆಗಳಿಂದ ವಶಪಡಿಸಿಕೊಂಡಿರುವ ಸಕ್ಕರೆಯನ್ನು ಮಾರಾಟ ಮಾಡಿ ಬರುವ ಹಣದಿಂದ ರೈತರ ಬಾಕಿಯನ್ನು ಪಾವತಿಸಲು ಸರ್ಕಾರ ಮುಂದಾಗಿರುವುದು ಬೆಳಕಿಗೆ ಬಂದಿದೆ.
ಈ ಪ್ರಕ್ರಿಯೆ ಮುಂದಿನ ವಿಧಾನ ಮಂಡಲ ಅಧಿವೇಶನ ಆರಂಭವಾಗುವುದರೊಳಗೆ ನಡೆಯಲಿದ್ದು, ಇದರಿಂದ ರೈತರ 500 ಕೋಟಿ ರೂ ಬಾಕಿ ಪಾವತಿಯಾಗಲಿದೆ ಎನ್ನಲಾಗಿದೆ. ಮೂವತ್ತೆಂಟು ಸಕ್ಕರೆ ಕಾರ್ಖಾನೆಗಳ ಪೈಕಿ ಎಂಟು ಸಕ್ಕರೆ ಕಾರ್ಖಾನೆಗಳಿಂದ ವಶಪಡಿಸಿಕೊಂಡಿದ್ದ ಸಕ್ಕರೆಯನ್ನು ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಹಾಗೂ ಆಹಾರ ನಿಗಮಗಳು ಖರೀದಿ ಮಾಡಲು ಮುಂದಾಗಿದ್ದು, ಇದಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಅದು ವಿಳಂಬವಾಗುತ್ತಿದೆ.
ಇದೇ ರೀತಿ ಉಳಿದ ಮೂವತ್ತು ಸಕ್ಕರೆ ಕಾರ್ಖಾನೆಗಳು ತಮ್ಮ ಕಾರ್ಖಾನೆಗಳಿಂದ ವಶಪಡಿಸಿಕೊಂಡಿದ್ದ ಸಕ್ಕರೆಯನ್ನು ಹರಾಜು ಹಾಕಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದು, ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಏನೇ ಕಾನೂನು ಅಡ್ಡಿಗಳಿದ್ದರೂ ಅದನ್ನು ನಿವಾರಿಸಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ರಾಜ್ಯದ ಕಬ್ಬು ಬೆಳೆಗಾರರ ಬಳಿ 2013-14 ರಲ್ಲಿ ಖರೀದಿಸಿದ್ದ ಕಬ್ಬು ಬೆಳೆಗೆ ಸಂಬಂಧಿಸಿದಂತೆ ಪ್ರತಿ ಟನ್ ಗೆ 2500 ರೂ ದರ ನೀಡಲು ಸರ್ಕಾರ ಸೂಚಿಸಿತ್ತು.