ಬೆಂಗಳೂರು: ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟದಂತ ನವೀನ್ ಪಾರ್ಥೀವ ಶರೀರವು ಇಂದು ಮುಂಜಾನೆ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕುಟುಂಬಸ್ಥರು ಸೇರಿ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು.ಇಂತಹ ಅವರ ಪಾರ್ಥೀವ ಶರೀರಕ್ಕೆ ಇಂದು ಸ್ವಗ್ರಾಮ ಚಳಗೇರಿಯಲ್ಲಿ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಬಳಿಕ, ಎಸ್ ಎಸ್ ಆಸ್ಪತ್ರೆಗೆ ದೇಹದಾನವನ್ನು ಕುಟುಂಬಸ್ಥರು ಮಾಡಲಿದ್ದಾರೆ.
ಈ ಬಗ್ಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಮಾತನಾಡಿದಂತ ಮೃತ ನವೀನ್ ತಂದೆ ಶೇಖರಗೌಡ ಅವರು, ಇಂದು ಊರಿಗೆ ಆಗಮಿಸುತ್ತಿರುವಂತ ನವೀನ್ ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುತ್ತದೆ. ಅಂತಿಮ ವಿಧಿ ವಿಧಾನದ ಬಳಿಕ, ಊರಿನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ. ಈ ಬಳಿಕ ಅವರ ದೇಹವನ್ನು ಎಸ್ ಎಸ್ ಆಸ್ಪತ್ರೆಗೆ ದಾನವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಅಂದಹಾಗೇ ರಷ್ಯಾ ಸೇನೆ ನಡೆಸಿದಂತ ಶೆಲ್ ದಾಳಿಗೆ, ಉಕ್ರೇನ್ ನಲ್ಲಿ 21 ದಿನಗಳ ಹಿಂದೆ ನವೀನ್ ಸಾವನ್ನಪ್ಪಿದ್ದರು. ಅವರ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ತರೋದಕ್ಕೆ ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಈ ಬಳಿಕ ಕೊನೆಗೂ ಇಂದು ವಾಪಾಸ್ ಮರಳಿದ್ದು, ಬೆಂಗಳೂರಿನಿಂದ ಹುಟ್ಟೂರಿಗೆ ಆಯಂಬುಲೆನ್ಸ್ ಮೂಲಕ ಸಾಗಿಸಲಾಗುತ್ತಿದೆ.