ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಎರಡು ತಿದ್ದುಪಡಿ ಸಹಿತ ಮೂರು ವಿಧೇಯಕಗಳು ಅಂಗೀಕಾರಗೊಂಡಿವೆ.
ಅಂಗೀಕಾರಗೊಂಡಿರುವ ಮಸೂದೆಗಳು:
* 2011ರ ಕೆಎಎಸ್ ಅಧಿಕಾರಿಗಳ ಹುದ್ದೆಗೆ ಮಾನ್ಯತೆ, ಕರ್ನಾಟಕ ಸಿವಿಲ್ ಸೇವೆಗಳು (ನಿಯಂತ್ರಣ) ವಿಧೇಯಕ.
* ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ವಿಧೇಯಕ.
* ಕರ್ನಾಟಕ ಕ್ರಿಮಿನಲ್ ಕಾನೂನು ಅಧ್ಯಾದೇಶ (ತಿದ್ದುಪಡಿ) ವಿಧೇಯಕ.
ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅವರು 2011ರ ಕೆಎಎಸ್ ಅಧಿಕಾರಿಗಳ ಹುದ್ದೆಗೆ ಮಾನ್ಯತೆ, ಕರ್ನಾಟಕ ಸಿವಿಲ್ ಸೇವೆಗಳು (ನಿಯಂತ್ರಣ) ವಿಧೇಯಕವನ್ನು ಸಭೆಯ ಮುಂದೆ ಮಂಡಿಸಿದರು. ಸಭಾಧ್ಯಕ್ಷರು ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿ, ಅನುಮೋದನೆ ಸಿಕ್ಕಿರುವುದನ್ನು ಘೋಷಿಸಿದರು.
ಕಂದಾಯ ಸಚಿವ ಆರ್. ಅಶೋಕ್ ಅವರು ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ 2022ನ್ನು ಸಭೆಗೆ ಮಂಡಿಸಿದರು. ಇನ್ನೊಂದು ವಿಧೇಯಕ ಕರ್ನಾಟಕ ಕ್ರಿಮಿನಲ್ ಕಾನೂನು ಅಧ್ಯಾದೇಶ (ತಿದ್ದುಪಡಿ)ವನ್ನು ಕಾನೂನು ಸಚಿವ ಮಾಧುಸ್ವಾಮಿ ಅವರು ಮಂಡನೆ ಮಾಡಿದರು. ಎರಡೂ ಮಸೂದೆಗಳನ್ನು ಧ್ವನಿ ಮತಕ್ಕೆ ಹಾಕಿದ ಸಭಾಧ್ಯಕ್ಷರು, ವಿಧೇಯಕಗಳಿಗೆ ಅನುಮೋದನೆ ಲಭಿಸಿದೆ ಎಂದು ಪ್ರಕಟಿಸಿದರು.