ಬೆಂಗಳೂರು: ನಗರದ ಹೊರವಲಯದಲ್ಲಿರುವ ಯಲಹಂಕದಲ್ಲಿ ಕೆರೆ ಕೋಡಿ ಹರಿದು ನೀರು ತುಂಬಿದ ಕೇಂದ್ರೀಯ ವಿಹಾರ ವಸತಿ ಸಮುಚ್ಚಯ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಿದರು. ತೆರೆದ ಜೀಪಿನಲ್ಲಿ ಹಾನಿಯಾದ ಪ್ರದೇಶವನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಕಳೆದ ಮೂರು ದಿನಗಳಿಂದ ಯಲಹಂಕ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದರಿಂದ ಯಲಹಂಕ ಕೆರೆ ಕೋಡಿ ಒಡೆದಿದೆ. ಇದರಿಂದ ಯಲಹಂಕ ಹಾಗೂ ಕೆಳಭಾಗದ ಹಲವಾರು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ನಾಲ್ಕೈದು ಅಡಿಗಳಷ್ಟು ನೀರು ನಿಂತಿದ್ದರಿಂದ ಯಲಹಂಕ ಕೇಂದ್ರೀಯ ವಿಹಾರದ 603 ಮಂದಿ ಇರುವ ವಸತಿ ಸಮುಚ್ಚಯಗಳ ಜನರ ಓಡಾಟಕ್ಕೂ ತೀವ್ರ ಕಷ್ಟವಾಗಿದೆ. ಇಲ್ಲಿ ಸುಮಾರು 400 ಮನೆಗಳಿಗೆ ಹಾನಿಯಾಗಿದೆ. 10 ಕಿ.ಮೀ. ಮುಖ್ಯರಸ್ತೆ ಮತ್ತು 20 ಕಿ.ಮೀ. ಇತರ ರಸ್ತೆಗಳು ಹಾನಿಯಾದ ಬಗ್ಗೆ ವರದಿ ಇದೆ. ನೀರು ನುಗ್ಗಿದ ಮನೆಗಳಿಗೆ ತಲಾ 10 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದು, ಇಂದೇ ಬಿಡುಗಡೆಯಾಗಲಿದೆ ಎಂದರು.
ಯಲಹಂಕ ಕೆರೆಯ ಮೇಲ್ಭಾಗದಲ್ಲಿ 11 ಕೆರೆಗಳಿವೆ. ಈ ಬಾರಿ ಎಲ್ಲೆಡೆ ವ್ಯಾಾಪಕ ಮಳೆಯಾಗಿದ್ದರಿಂದ ಎಲ್ಲ ಕೆರೆಗಳು ತುಂಬಿ, ಯಲಹಂಕ ಕೆರೆಗೆ ನೀರು ತುಂಬಿದೆ. ಒಳ ಹರಿವು ದೊಡ್ಡ ಪ್ರಮಾಣದಲ್ಲಿರುವುದರಿಂದ ಗಾತ್ರ ಕಿರಿದಾದ ಎರಡು ರಾಜಕಾಲುವೆಗಳು ಸಾಕಾಗುತ್ತಿಲ್ಲ. ಕೆಲವೆಡೆ ರಾಜಕಾಲುವೆ ಅತಿಕ್ರಮಣವಾಗಿರುವುದು, ಮುಚ್ಚಿರುವುದನ್ನೂ ಗಮನಿಸಲಾಗಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಕೆರೆ ನೀರು ಹರಿಯುವ ಎರಡೂ ರಾಜಕಾಲುವೆಗಳನ್ನು 8 ಅಡಿಗಳಿಂದ 30 ಅಡಿಗಳಿಗೆ ಅಗಲಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರು ಹರಿಯಲು ಇರುವ ಅಡಚಣೆ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಇಡೀ ಬೆಂಗಳೂರು ನಗರದಲ್ಲಿಯೂ ರಾಜಕಾಲುವೆ ಸಮಸ್ಯೆ ಇದೆ. ಈ ವರ್ಷ 50 ಕಿ.ಮೀ.ಗಳಷ್ಟು ರಾಜಕಾಲುವೆ ದುರಸ್ತಿಯನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಇದೀಗ ಹೆಚ್ಚುವರಿಯಾಗಿ ಇನ್ನೂ 50 ಕಿ.ಮೀ. ದುರಸ್ತಿ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅದಕ್ಕೆ ಬೇಕಾದ ಹಣಕಾಸು ಒದಗಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.