ಮೈಸೂರು: ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ನೆಲೆವೀಡಾದ ಚಾಮುಂಡಿಬೆಟ್ಟವನ್ನು ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ಪ್ರದೇಶವನ್ನಾಗಿ ಮಾಡದೆ, ಬೆಟ್ಟದ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಡಬೇಕು ಎಂದು ಹೆಸರಾಂತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ತೀರ್ಥಕ್ಷೇತ್ರಗಳ ಪುನಶ್ಚೇತನ, ಆಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆಯಡಿ(ಪ್ರಸಾದ) ಮೈಸೂರಿನ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ನೋಡಿ ನೋವುಂಟಾಗಿದೆ. ಚಾಮುಂಡಿಬೆಟ್ಟದ ನೈಸರ್ಗಿಕ ಸೌಂದರ್ಯ ಉಳಿಯಬೇಕು. ಆಧುನಿಕ ಶೈಲಿಯ ಕಟ್ಟಡಗಳು ನಿರ್ಮಾಣವಾಗಬಾರದು. ಪರಿಸರಕ್ಕೆ ಪೂರಕವಾದ ಹೊಸ ಪರಿಕಲ್ಪನೆಯಡಿ ಅಭಿವೃದ್ಧಿ ಕೆಲಸ ನಡೆಯಲಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ವಿಐಪಿಗಳ ವಾಹನ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿ, ಪರಿಸರ ಸ್ನೇಹಿತ ವಿದ್ಯುತ್ ಚಾಲಿತ ಬಸ್ ಸಂಚಾರ ಆರಂಭಿಸಬೇಕು ಎಲೆಕ್ಟಿçಕ್ ಬಸ್ ಸಂಚಾರ ಆರಂಭಿಸಬೇಕು. ದೇವಸ್ಥಾನದ ಆಡಳಿತ ಮಂಡಳಿಯವರು ಮಾತ್ರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ಇತರರಿಗೆ ಅವಕಾಶ ನೀಡಬಾರದು. ಬೆಟ್ಟದಲ್ಲಿ ವಾಸಿಸುತ್ತಿರುವ ಜನಸಂಖ್ಯೆ 4 ಸಾವಿರ ದಾಟಿದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಿ, ಮೈಸೂರು ನಗರದಲ್ಲಿ ಪುನರ್ವಸತಿ ಕಲ್ಪಿಸಬೇಕು. ಅರ್ಚಕರು ದೇವಸ್ಥಾನದ ಸಿಬ್ಬಂದಿಗೆ ಮಾತ್ರ ಬೆಟ್ಟದಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ರಾಜ್ಯದಲ್ಲಿ ಈ ಹಿಂದಿದ್ದ ಸರ್ಕಾರ ಬೆಟ್ಟದ ಮೇಲೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ ಪರಿಣಾಮ ಯಾತ್ರಾ ಸ್ಥಳವಾಗಿದ್ದ ಚಾಮುಂಡಿ ಬೆಟ್ಟ ವಾಣಿಜ್ಯ ಕೇಂದ್ರವಾಗಿದೆ. ಪ್ರಶಾಂತತೆ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.