ಕುಶಾಲನಗರ: ಇಲ್ಲಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಶ್ರೀ ಗಣಪತಿ ದೇವರ ವಾರ್ಷಿಕ ರಥೋತ್ಸವ ಮಂಗಳವಾರ ಬೆಳಗ್ಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಾರ್ತಿಕ ಮಾಸದ ಕೃಷ್ಣ ಪಕ್ಷದ ಧನುರ್ಲಗ್ನದಲ್ಲಿ ಬೆಳಗ್ಗೆ 8-44 ಗಂಟೆಗೆ ಸರಿಯಾಗಿ ಗಣಪತಿ ದೇವತಾ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿರಿಸಿದ ಅರ್ಚಕರ ತಂಡ, ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ನೆರೆದಿದ್ದ ಭಕ್ತಗಣ ಗಣಪತಿ ದೇವರ ಜಯಕಾರದೊಂದಿಗೆ ರಥವನ್ನು ಎಳೆದು ಪುನೀತರಾದರು.
ದೇವಾಲಯದ ಮುಂಬದಿಯಿಂದ ಹೊರಟ ವಿನಾಯಕನ ರಥವನ್ನು ರಥಬೀದಿಯ ಆಂಜನೇಯ ಸ್ವಾಮಿ ದೇವಾಲಯದವರೆಗೆ ಎಳೆದು ತಂದ ಭಕ್ತರು ಬಳಿಕ ಸ್ವಸ್ಥಾನಕ್ಕೆ ಮರಳಿಸಿ ಪೂಜ್ಯತಾ ಭಾವ ಮೆರೆದರು.
ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯವನ್ನು ವಿದ್ಯುತ್ ದೀಪ, ತಳಿರು – ತೋರಣ ಹಾಗೂ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು.ರಥೋತ್ಸವದ ಚಾಲನೆಗೆ ಮೊದಲು ದೇವಾಲಯದ ಮುಂದೆ ಸಂಪ್ರದಾಯದಂತೆ ಗೋಪೂಜೆ ನೆರವೇರಿಸಲಾಯಿತು.
ಪ್ರತೀ ವರ್ಷ ರಥೋತ್ಸವದ ಕೆಲ ನಿಮಿಷಗಳ ಮುನ್ನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರಥದ ಮುಂದೆ ಹಚ್ಚುತ್ತಿದ್ದ ಸಾಮೂಹಿಕ ಕರ್ಪೂರದಾರತಿ ಹಾಗೂ ಭಜನೆ ಈ ಬಾರಿ ಕಂಡುಬರಲಿಲ್ಲ. ಶಾಸಕರಿಂದ ಪೂಜೆ: ರಥೋತ್ಸವದ ಅಂಗವಾಗಿ ಕುಶಾಲನಗರಕ್ಕೆ ಆಗಮಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ರಥಕ್ಕೆ ನಮಿಸಿದರು.
ರಥಕ್ಕೆ ಚಾಲನೆ ನೀಡುತ್ತಿದ್ದಂತೆಯೇ ದೇಗುಲದ ಆವರಣದಲ್ಲಿ ನೆರೆದಿದ್ದ ಭಕ್ತಸಮೂಹ ರಥದ ಮೇಲೆ ಬಾಳೆ ಹಣ್ಣು ಹಾಗೂ ಜವುನಗಳನ್ನು ಎಸೆದು ಪುನೀತರಾದರು. ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ಮೂಲಕ ಪ್ರಸಾದ ವಿನಿಯೋಗ ನಡೆಯಿತು.
ಕುಶಾಲನಗರ ಪೊಲೀಸರು ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರು. ದೇವಾಲಯದ ಅಭಿವೃದ್ದಿ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ನೇತೃತ್ವದಲ್ಲಿ ಕಾರ್ಯದರ್ಶಿ ಶ್ರೀನಿವಾಸರಾವ್, ಪದಾಧಿಕಾರಿಗಳಾದ ಜಿ.ಎಲ್.ನಾಗರಾಜು, ವಿ.ಪಿ.ಶಶಿಧರ್, ಪುಂಡರೀಕಾಕ್ಷ, ಮುನಿಸ್ವಾಮಿ, ಬಾಬು, ಎಂ.ವಿ.ನಾರಾಯಣ ಮೊದಲಾದವರು ಹಾಜರಿದ್ದರು.