ಶ್ರವಣಬೆಳಗೊಳ : ಬೆಂಗಳೂರಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಶಿಕ್ಷಕಿಯೊಬ್ಬರ ಮೇಲೆ ಲಾರಿ ಹರಿದು ಶಿಕ್ಷಕಿ ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಘಟನೆ ರಾಜ್ಯದಲ್ಲಿ ಸಂಭವಿಸಿದ್ದು, ದಂಪತಿ ದುರಂತ ಅಂತ್ಯಕಂಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ದಂಪತಿ ಧನಂಜಯ (45) ಮತ್ತು ಕಾಮಿನಿ (35) ಮೃತ ದುರ್ದೈವಿಗಳು. ಇವರ ಪುತ್ರ ರತ್ಗೌಡ (15) ತೀವ್ರವಾಗಿ ಗಾಯಗೊಂಡಿದ್ದಾನೆ.
ಬೆಂಗಳೂರಿಗೆ ಬುಧವಾರ ಮಧ್ಯಾಹ್ನ ಮಗನ ಜತೆ ದಂಪತಿ ಬೈಕ್ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಳ ಗ್ರಾಮದ ರಚನಾ ಶಾಲೆ ಬಳಿ ರಸ್ತೆಬದಿಯ ಗುಂಡಿ ಮೇಲೆ ಬೈಕ್ ಚಲಿಸಿದ್ದು, ಆಯತಪ್ಪಿ ಮೂವರೂ ಕೆಳಕ್ಕೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಕಾಮಿನಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಧನಂಜಯರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದರು. 15 ವರ್ಷದ ಬಾಲಕ ರತ್ಗೌಡ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.