ಬೆಂಗಳೂರು : ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಸಮಸ್ಯೆಗಳು ಮತ್ತು ಕೋರ್ಟ್ ವಿವಾದ ವಿಚಾರವಾಗಿ ಚರ್ಚಿಸಲು ಇಂದು ಶನಿವಾರ ವರ್ಚುವಲ್ ಕಾನ್ಫರೆನ್ಸ್ ನಡೆಸುತ್ತಿದ್ದೇನೆ, ನಮ್ಮ ರಾಜ್ಯದ ಪರವಾಗಿ ಪ್ರತಿನಿಧಿಸುವ ದೆಹಲಿಯ ನ್ಯಾಯವಾದಿಗಳು, ನಮ್ಮ ಎಜಿಒ, ನೀರಾವರಿ ತಾಂತ್ರಿಕ ತಜ್ಞರು ಭಾಗವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ನೀರಾವರಿ ವಿಚಾರದಲ್ಲಿ ಕರ್ನಾಟಕ ಮಧ್ಯಸ್ಥರದ ರಾಜ್ಯವಾಗಿದೆ. ಹೀಗಾಗಿ ನಮ್ಮ ಮೇಲಿರುವ ಮತ್ತು ಕೆಳಗಿರುವ ರಾಜ್ಯಗಳು ಆಗಾಗ ಜಲವಿವಾದ ತಗಾದೆ ತೆಗೆಯುತ್ತದೆ. ಕೃಷ್ಣ ಮತ್ತು ಕಾವೇರಿ ಜಲವಿವಾದಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಧೀಕರಣ ಆದೇಶ ಬಂದಿದೆ.
ಕೃಷ್ಣ ನದಿಗೆ ಸಂಬಂಧಪಟ್ಟಂತೆ ಮೊದಲನೇ ಆದೇಶ ಬಚಾವತವಾಡು, ಎರಡನೇ ಅದೇಶ ಬ್ರಿಜೇಶ್ ಮಿಶ್ರಾ ಆದೇಶ, ಇವೆರಡೂ ಆದೇಶಗಳ ಅಧಿಸೂಚನೆಯಾಗಬೇಕಿದ್ದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಅದರ ಜೊತೆಗೆ ಮಹದಾಯಿ ನದಿಯ ಆದೇಶ ಬಂದರೂ ಕೂಡ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಮೂರು ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಕರಾರು ತೆಗೆದಿರುವುದರಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ವಿವರಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನ್ಯಾಯಾಧೀಕರಣ ಆದೇಶ ಬಂದು ನೋಟಿಫಿಕೇಶನ್ ಆದರೂ ಸಹ ಮೇಕೆದಾಟು ಸೇರಿದಂತೆ ಹಲವಾರು ವಿಚಾರವಾಗಿ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿರುವುದರಿಂದ ಇನ್ನೂ ಇತ್ಯರ್ಥವಾಗಬೇಕಿದೆ. ಹೀಗೆ ಜಲವಿವಾದಗಳ ವಿಚಾರಣೆ ಪ್ರಗತಿ, ಜಲ ವಿವಾದ ಬಗೆಹರಿಸುವ ಬಗ್ಗೆ ಹಲವಾರು ಸಭೆಗಳನ್ನು ಮಾಡಿದ್ದೇವೆ. ಈಗ ಕೋವಿಡ್ ಇರುವ ಕಾರಣ ವರ್ಚುವಲ್ ಆಗಿ ಮಾಡುತ್ತಿದ್ದು, ಆದಷ್ಟು ಬೇಗನೆ ಜಲವಿವಾದಗಳನ್ನು ಬಗೆಹರಿಸಲು ಗಂಭೀರ ಯತ್ನಗಳನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ಇಂದಿನ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.