ಬೆಂಗಳೂರು (ಮಾ.2) : ಭಾರತದ ಪ್ರಮುಖ ನ್ಯಾನೋ ಟೆಕ್ ಕಾರ್ಯಕ್ರಮವಾದ ಇಂಡಿಯಾ ನ್ಯಾನೋ ಮೇಳ ಮಾರ್ಚ್ 7 ರಂದು ನಡೆಯಲಿದೆ ಎಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಸುದ್ಧಿಗೋಷ್ಠಿ ನಡೆಸಿ ಮಾತಾಡಿದ ಅವರು ಬೆಂಗಳೂರು ಇಂಡಿಯಾ ನ್ಯಾನೋ ಮೇಳ ಮಾರ್ಚ್ 7 ರಿಂದ 9ರವರೆಗೆ ವರ್ಚುವಲ್ ಆಗಿ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಅಂತ ಹೇಳಿದ್ರು. ಮುಖ್ಯ ಅತಿಥಿಯಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾಗವಹಿಸಲಿದ್ದಾರೆ. ನ್ಯಾನೋ ಸೈನ್ಸ್ ಮತ್ತು ನ್ಯಾನೋ ತಂತ್ರಜ್ಞಾನ ಕೇಂದ್ರೀಕರಿಸುವ ಭಾರತದ ಪ್ರಮುಖ ನ್ಯಾನೋ ಟೆಕ್ ಕಾರ್ಯಕ್ರಮವಾಗಿದ್ದು, ಸುಸ್ಥಿರ ಭವಿಷ್ಯಕ್ಕಾಗಿ ನ್ಯಾನೋಟೆಕ್ ಎಂಬ ಮುಖ್ಯ ವಿಷಯ ವಸ್ತುವಿನೊಂದಿಗೆ ಶೃಂಗ ಸಭೆ ನಡೆಯಲಿದೆ. ಕೆನಡಾ, ಜರ್ಮನಿ, ಇಸ್ರೇಲ್, ನಾರ್ತ್ ರೈನ್ ವೆಸ್ಟ್ ಫಾಲಿಯಾದ ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ ನ ಪಾಲುದಾರರ ಜೊತೆಗೆ 2500ಕ್ಕೂ ಹೆಚ್ಚು ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇಂಡಿಯಾ ನ್ಯಾನೋ ಮೇಳ ವರ್ಚುವಲ್ ಆಗಿ ನಡೆಯಲಿದೆ. 75 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಣಕಾರರು 25 ಸೆಷನ್ಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಅಲ್ಲದೇ 40ಕ್ಕೂ ಹೆಚ್ಚು ಕಂಪನಿಗಳಿಂದ ನ್ಯಾನೋ ಟೆಕ್ ಉತ್ಪನ್ನಗಳು, ಸೇವೆಗಳು ಮತ್ತು ನಾವೀನ್ಯತೆ ಮತ್ತು ಪೋಸ್ಟರ್ ಸೆಷನ್ ಮತ್ತು 150ಕ್ಕೂ ಹೆಚ್ಚು ಯುವ ಸಂಶೋಧಕರಿಂದ ಸಂಶೋಧನೆ ಪ್ರದರ್ಶನಗೊಳ್ಳಲಿದೆ.ನ್ಯಾನೋ ಶೃಂಗದಲ್ಲಿ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಅವಾರ್ಡ್, ಬೆಂಗಳೂರು ಇಂಡಿಯಾ ನ್ಯಾನೋ ಇನ್ನೋವೇಷನ್ ಅವಾರ್ಡ್, ಕರ್ನಾಟಕ ಡಿಎಸ್ ಟಿ ನ್ಯಾನೋ ಸೈನ್ಸ್ ಫೆಲೋಶಿಪ್ ನೀಡಲಾಗುತ್ತದೆ.
ಪದವಿ ವಿದ್ಯಾರ್ಥಿಗಳಿಗೆ ನ್ಯಾನೋ ಯುವ ಕಾರ್ಯಕ್ರಮ, ಸ್ಟಾರ್ಟಪ್ ಪಿಚಿಂಗ್, ರಾಷ್ಟ್ರೀಯ ನ್ಯಾನೋ ಟೆಕ್ ರಸಪ್ರಶ್ನೆ ಆಯೋಜನೆ ಮಾಡಲಾಗಿದೆ. ಔಷಧ, ಉತ್ಪಾದನೆ, ಎಲೆಕ್ಟ್ರಾನಿಕ್ಸ್, ಹೈಡ್ರೋಜನ್ ಆರ್ಥಿಕತೆ, ಆಹಾರ, ಕೃಷಿ ಮತ್ತು ಜವಳಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನದ ಅನ್ವಯವನ್ನು ಕೇಂದ್ರೀಕರಿಸಲಿರುವ ಸಮ್ಮೇಳನದ ಸೆಷನ್ಗಳು. ನ್ಯಾನೋ ಫ್ಯಾಬ್ರಿಕೇಷನ್, ಬಾಟಮ್-ಅಪ್ ಸಿಂಥೆಸಿಸ್, ಕ್ಯಾರೆಕ್ಟರೈಸೇಷನ್ ಟೂಲ್ಸ್ ಮತ್ತು ನ್ಯಾನೋ ಬಯಾಲಜಿ ಕೇಂದ್ರೀಕರಿಸಲಿರುವ ಸೆಷನ್ಗಳು ನಡೆಯಲಿವೆ. ಸೆಷನ್ ಗಳಲ್ಲಿ ಹಾರ್ವರ್ಡ್ ವಿವಿಯ ಪ್ರೊ. ಫೆಡೆರಿಕೊ ಕ್ಯಾಪಾಸ್ಸೊ, ನಾನ್ಯಾಂಗ್ ತಾಂತ್ರಿಕ ವಿವಿಯ ಪ್ರೊ. ಕ್ಸಿಯಾಡಾಂಗ್ ಚೆನ್, ಕ್ಯಾಲಿಫೋರ್ನಿಯಾ ವಿವಿಯ ಪ್ರೊ. ಪೀಡಾಂಗ್ ಯಾಂಗ್, ಎಸ್ ಎಎಸ್ ಟಿಆರ್ ಎ ಡೀಮ್ಡ್ ವಿವಿಯ ಪ್ರೊ. ಎಸ್. ಸ್ವಾಮಿನಾಥನ್ ಭಾಗವಹಿಸಲಿದ್ದಾರೆ.
ನಂತರ ಮಾತನಾಡಿದ ಸಚಿವ ಡಾ. ಅಶ್ವಥ್ ನಾರಾಯಣ್ ನ್ಯಾನೋ ಟೆಕ್ನಾಲಜಿ ಸುಸ್ಥಿರವಾಗಿದ್ರೆ ಮಾತ್ರ ಬಂಡವಾಳ ಹೂಡಿಕೆ ಆಗಲಿದೆ. ಜನತೆಗೆ ಉಪಯೋಗ ಆಗುವುದರ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕು. ಅಹಾರ, ಕೃಷಿ, ಟೆಕ್ನಾಲಜಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕು. ಸರ್ಕಾರ ಯಾವಾಗಲೂ ಇಂಡಸ್ಟ್ರಿ ಜೊತೆಗೂಡಿ ಕೆಲಸ ಮಾಡಲಿದೆ. ಸೈನ್ಸ್ ಸಿಟಿ ಆಗಿದ್ದ ಬೆಂಗಳೂರು ಈಗ ಟೆಕ್ನಾಲಜಿ, ಐಟಿ, ಬಿಟಿ ಸಿಟಿ ಆಗಿದೆ. ವಿಜ್ಞಾನದಿಂದಲೇ ಇಷ್ಟೆಲ್ಲಾ ಬದಲಾವಣೆ ಆಗಿದೆ. ಸೈನ್ಸ್ ಆಂಡ್ ಟೆಕ್ನಾಲಜಿ ಪ್ರಾಜೆಕ್ಟ್ ಮಾಡಲು, 1,500 ಶಾಲೆಗಳಿಗೆ 250 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನ್ಯಾನೋ ಫಾರ್ ಯಂಗ್ ಅಂತ ಇರುತ್ತದೆ ಆದ್ರೆ ಯುವಕರಿಗೆ ಸಿಗುತ್ತಿಲ್ಲ.
ಇಂದು ಮುಂದುವರಿದ ರಾಷ್ಟ್ರಗಳಲ್ಲಿ ಟ್ಯುಟೋರಿಯಲ್ಸ್ ಸಾಕಷ್ಟು ಆವಿಷ್ಕಾರ ಮಾಡುತ್ತಿವೆ. ಸ್ಟಾರ್ಟಪ್ನಲ್ಲಿ ಅಮೇರಿಕ, ಚೀನಾ ಬಿಟ್ಟರೆ ಭಾರತ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನ ಯಾವುದು ಅಂತ ಹುಡುಕಿದ್ರೆ ಅದು ಕರ್ನಾಟಕ ಇದೆ. ಹತ್ತು ವರ್ಷದಲ್ಲಿ ಸ್ಟಾರ್ಟಪ್ನಲ್ಲಿ ಕರ್ನಾಟಕ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ವೇಗ ನೀಡಿದರೆ ನಾವು ಎಲ್ಲಿಗೋ ಹೋಗಿಬಿಡುತ್ತೇವೆ ಎಂದು ಹೇಳಿದರು.