ಬೆಂಗಳೂರು: ಮದ್ಯ ಮಾರಾಟ ದರ ಏರಿಸುವ ಯಾವುದೇ ಚಿಂತನೆಯಿಲ್ಲ. ಆದಾಯ ಹೆಚ್ಚಳದ ಕುರಿತು ಬಜೆಟ್ಗೆ ಮುನ್ನ ಮುಖ್ಯಮಂತ್ರಿ ಜತೆಗೆ ರ್ಚಚಿಸಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಕರೊನಾ ಸಂಕಷ್ಟದ ನಡುವೆಯೂ ಅಬಕಾರಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಗಮನಾರ್ಹ ಆದಾಯ ಸಂದಾಯವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) 25 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿಯಿದ್ದು, ಈಗಾಗಲೆ 23,247 ಕೋಟಿ ರೂ. ಸಂಗ್ರಹವಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಅಬಕಾರಿ ಸಂಘ- ಸಂಸ್ಥೆಗಳೊಂದಿಗೆ ಬಜೆಟ್ ಪೂರ್ವ ಸಭೆ ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.
2022-23ನೇ ಸಾಲಿನ ಮುಂಗಡಪತ್ರ ಪೂರ್ವ ಅಬಕಾರಿ ಸಂಘ-ಸಂಸ್ಥೆಗಳ ಜತೆಗೆ ಸೌಹಾರ್ದಯುತ ಚರ್ಚೆಯಾಗಿದೆ. ಸಿಎಂ ಜತೆಗೆ ಅಬಕಾರಿ ಸಂಘಟನೆಗಳ ಬೇಡಿಕೆಗಳ ಬಗ್ಗೆ ಮತ್ತೊಮ್ಮೆ ರ್ಚಚಿಸುತ್ತೇವೆ ಎಂದರು.
ಅಬಕಾರಿ ಉದ್ಯಮದ ಸುಗಮ ಕಾರ್ಯನಿರ್ವಹಣೆ, ಬೊಕ್ಕಸಕ್ಕೆ ವರಮಾನದ ದೃಷ್ಟಿಯಿಂದ ಚಾಲ್ತಿ ಅಬಕಾರಿ ಕಾಯ್ದೆ ಮತ್ತು ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಕರ್ನಾಟಕ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ಹೆಗ್ಡೆ ಮೊರೆಯಿಟ್ಟಿದ್ದಾರೆ. ನಿರಂತರ ನಷ್ಟಕ್ಕೆ ಗುರಿಯಾಗಿರುವ ದ್ರಾಕ್ಷಾ ವೈನ್ ಮಾರಾಟಗಾರರಿಗೆ ಬಿಯರ್ ಮಾರಾಟ ಮಾಡಲು ಅನುಮತಿ ನೀಡಿ ಸಂಕಷ್ಟದಿಂದ ಪಾರು ಮಾಡಬೇಕು ಎಂದು ರಾಜ್ಯ ದ್ರಾಕ್ಷಾ ವೈನ್ ಮಾರಾಟಗಾರರ ಸಂಘ ಮನವಿ ಮಾಡಿದೆ.