ಬೆಂಗಳೂರು: ವಾರಾಂತ್ಯದ ಲಾಕ್ಡೌನ್ ಜಾರಿ ಹಾಗೂ ನೈಟ್ ಕರ್ಫ್ಯೂ ಎರಡು ವಾರ ಮುಂದುವರಿಕೆ, ಬೆಂಗಳೂರಿನಲ್ಲಿ 10-12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳನ್ನು ಮುಚ್ಚಿ ಕೇವಲ ಆನ್ಲೈನ್ ತರಗತಿ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರ ಸಭೆ ಕರೆಯಲಾಗಿತ್ತು.
ಜ.7 ಶುಕ್ರವಾರ ರಾತ್ರಿ 10ರಿಂದ ಸೋಮವಾರ ಜ.10ರವರೆಗೆ ವಾರಾಂತ್ಯದ ಕರ್ಫ್ಯೂ ಇರುತ್ತದೆ. ಇದರ ಜೊತೆಗೆ ಮುಂದಿನ ಎರಡು ವಾರ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ ಎಂದು ಸಭೆಯ ಬಳಿಕ ಸಚಿವರಾದ ಆರ್. ಅಶೋಕ್ ಮತ್ತು ಡಾ.ಕೆ. ಸುಧಾಕರ್ ಹೇಳಿದರು.
ರಾಜ್ಯದಲ್ಲಿ ಜಾರಿ ಮಾಡಬೇಕಾದ ಕಠಿಣ ರೂಲ್ಸ್ಗಳು, ಬೆಡ್ಗಳ ಲಭ್ಯತೆ, ಔಷಧಗಳ ದಾಸ್ತಾನು ಸಹಿತ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ.
ಶಾಲೆಗಳಿಗೆ ಆನ್ಲೈನ್ ತರಗತಿ:
ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕರೆಯಿಸದೆ ಆನ್ಲೈನ್ ಮೂಲಕ ಮಾತ್ರ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬೆಂಗಳೂರಲ್ಲಿ 10-12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ಶಾಲೆ ಮುಚ್ಚಲು ತೀರ್ಮಾನಿಸಲಾಗಿದೆ. ಇದು ಪದವಿ ಕಾಲೇಜುಗಳಿಗೂ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದರು.
ಸರ್ಕಾರಿ ಕಚೇರಿಗಳು ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲು ತೀರ್ಮಾನಿಸಿ. ಉಳಿದಂತೆ ಚಿತ್ರಮಂದಿರ, ಮಾಲ್, ಬಾರ್, ಕ್ಲಬ್ಗಳಿಗೆ ಶೇ 50ರಷ್ಟು ಮಾತ್ರ ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ.
ಮಹಾರಾಷ್ಟ್ರ,ಕೇರಳ ಮತ್ತು ಗೋವಾದಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ಮತ್ತು ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ವಿದೇಶಿ ಪ್ರಯಾಣಿಕರಿಗೆ ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ಅನ್ವಯ ಮಾಡಲಾಗುತ್ತದೆ.