ಬೆಂಗಳೂರು : ಸ್ವರಧಾರಾ ಕರ್ನಾಟಕ ರಾಜ್ಯ ಹಿನ್ನಲೆ ಗಾಯಕರ ಮಹಾಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನದ ಪ್ರಯುಕ್ತ, ನಾಟಕ ಪ್ರದರ್ಶನ ಮತ್ತು ರಂಗ ಗಾಯನ ನಡೆಯಿತು. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಜನಾದ್ರಿ ಸಭಾಂಗಣದಲ್ಲಿ ನಡೆದ ನಾಟಕ ಮತ್ತು ರಂಗ ಗೀತೆಗಳ ಪ್ರದರ್ಶನ ಪ್ರೇಕ್ಷಕರ ಗಮನಸೆಳೆಯಿತು.
ಹಿರಿಯ ರಂಗ ಕರ್ಮಿ ಶಿವರಾಂ ಹೆಗ್ಡೆ ನಿರ್ದೇಶನದ “ಕಂಡೋರ ದುಡ್ಡು” ನಾಟಕದ ಮೊದಲ ವೇದಿಕೆ ಪ್ರದರ್ಶನ, ” ನನ್ನತ್ತೆ ನನ್ನಳಿಯ” ನಾಟಕ ಅತ್ಯಂತ ಯಶಸ್ವಿ ಪ್ರದರ್ಶನ ಕಂಡವು. ರಂಗ ಗೀತೆಗಳನ್ನು ಸ್ವರಧಾರ ಗಾಯನ ತಂಡದ ಗಾಯಕ ಗಾಯಕಿಯರು ಹಾಡಿ ನಲಿದರು. ಉತ್ತರಕರ್ನಾಟಕದ ಗೀಗೀ ಪದಗಳು, ಜಾನಪದಗೀತೆಗಳು ಹಾಗೂ ಭಾವಗೀತೆ ಗಳ ಪ್ರದರ್ಶನ ಪ್ರೇಕ್ಷಕರನ್ನು ಮನಸೂರೆ ಗೊಳಿಸಿದವು. ಹಿರಿಯ ರಂಗಭೂಮಿ ಕಲಾವಿದರಾದ ಶಿವರಾಂ ಹೆಗ್ಡೆ ಅವರಿಗೆ ಧನಸಹಾಯದ ಮೂಲಕ ಸನ್ಮಾನಿಸಲಾಯಿತು.
ನಟರಾದ ಗಂಡಸಿ ಸದಾನಂದ ಸ್ವಾಮಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದೆ ರತ್ನಮಾಲಾ, ಸಂಸ್ಥೆಯ ಅಧ್ಯಕ್ಷೆ ಪ್ರೇಮಲತಾ ಎಂ ಹದ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.