ಬೆಂಗಳೂರು,ನ.27 : ಹಗಲು ವೇಳೆಯಲ್ಲಿಯೇ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು ಮಹಿಳೆಯನ್ನು ಬೆದರಿಸಿ 50 ಸಾವಿರ ರೂ. ಬೆಲೆಯ ಉಂಗುರ, ಓಲೆ ಹಾಗೂ ದೇವರ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
ಚಂದ್ರಾನಗರದ ಪೈಪ್ಲೈನ್ ನಿವಾಸಿ ಚಿತ್ರಾ (56) ದರೋಡೆಗೊಳಗಾದ ಮಹಿಳೆ. ಇವರಿಗೆ ಸೇರಿದ ಡೂಪ್ಲೆಕ್ಸ್ ಮನೆಯಲ್ಲಿ ಚಿತ್ರಾ ಅವರು ಮೊದಲ ಮಹಡಿಯಲ್ಲಿ ಒಬ್ಬರೇ ಇದ್ದರು. ಮೇಲಿನ ಮನೆಯಲ್ಲಿ ಅಳಿಯ-ಮಗಳು ಇದ್ದರು. ನಿನ್ನೆ ಸಂಜೆ 4.30ರಿಂದ 5 ಗಂಟೆ ಮಧ್ಯೆ ಮೂವರು ದರೋಡೆಕೋರರು ಮನೆಗೆ ನುಗ್ಗಿ ಚಿತ್ರಾ ಅವರನ್ನು ಬೆದರಿಸಿ ಉಂಗುರ, ಓಲೆ ಬಿಚ್ಚಿಸಿಕೊಂಡ ನಂತರ ದೇವರ ಕೋಣೆಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ನಂತರ ಚಿತ್ರಾ ಅವರು ಅಳಿಯ-ಮಗಳಿಗೆ ವಿಷಯ ತಿಳಿಸಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಮನೆಯ ಸುತ್ತಮುತ್ತ ಹಾಗೂ ಆ ರಸ್ತೆಯಲ್ಲಿರುವ ಸಿಸಿ ಟಿವಿ ಪುಟೇಜ್ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.