ಬೆಂಗಳೂರು: ಮುಂದಿನ ದಿನಗಳಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಟ್ಯಾಕ್ಸಿ(ಹೆಲಿಕಾಫ್ಟರ್ ಸೇವೆ) ಒದಗಿಸುವ ಭರವಸೆಯನ್ನು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಈ ವಿಷಯ ಪ್ರಸ್ತಾಪಿಸಿದ ಅವರು ಥುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ತ್ವರಿತ ಮತ್ತು ಸುಗಮ ಪ್ರಯಾಣ ಸೇವೆಗಾಗಿ ಹೆಲಿಟ್ಯಾಕ್ಸಿ ಸೇವೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು.
ಮೂರು ತಿಂಗಳೊಳಗೆ ಈ ಸೇವೆ ಕಾರ್ಯರಂಭವಾಗಲಿದ್ದು, ಇದರಿಂದ ಬೆಂಗಳೂರು ನಗರದ ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಎಚ್ಎಎಲ್ ವಿಮಾನ ನಿಲ್ದಾಣ ಸೇರಿದಂತೆ ಹಲವು ಭಾಗಗಳ ನಡುವೆ ಶೀಘ್ರ ಮತ್ತು ಸುಗಮ ಪ್ರಯಾಣ ಸೇವೆ ಸಾರ್ವಜನಿಕರಿಗೆ ದೊರಕಲಿದೆ ಎಂದು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಇತರೆಡೆಗಳಿಂದ ವಿಮಾನ ನಿಲ್ದಾಣಕ್ಕೆ ತ್ವರಿತವಾಗಿ ತಲುಪುವುದು ಅಸಾಧ್ಯವಾಗಿದೆ ಆದ್ದರಿಂದ ಈ ವ್ಯವಸ್ಥೆಯಿಂದ ಉದ್ಯಮಿಗಳು ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಈ ಸೇವೆ ಆರಂಭವಾದರೆ ಎಲೆಕ್ಟ್ರಾನಿಕ್ ಸಿಟಿಯಿಂದ ಹತ್ತರಿಂದ ಹದಿನೈದಯ ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 300 ಹೆಲಿಕಾಫ್ಟರ್ಗಳಿದ್ದು 9 ಹೆಲಿಪ್ಯಾಡ್ಗಳಿವೆ. ಹವಾನಿಯಂತ್ರಿತ ಲಕ್ಸುರಿ ಟ್ಯಾಕ್ಸಿ ಸೇವೆ ದರದಲ್ಲಿ( ಕೈಗೆಟುಕುವ ದರದಲ್ಲಿ) ಹೆಲಿಟ್ಯಾಕ್ಸಿ ಸೇವೆ ಒದಗಿಸುವಂತೆ ಸಲಹೆ ಮಾಡಿದರು.ಉಡಾನ್-2 ಯೋಜನೆಯಲ್ಲಿ ಹೆಲಿಕಾಫ್ಟರ್ ಸೇವೆಗೆ ಹೆಚ್ಚು ಉತ್ತೇಜನ ನೀಡಲಾಗುವುದು. ಈ ಸೇವೆಯಿಂದ ಅಡೆತಡೆ ರಹಿತ ಮತ್ತು ತ್ವರಿತ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದು ಇದೇ ವೇಳೆ ತಿಳಿಸಿದರು.ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಇರಬಾರದು ಎಂಬ ನಿಯಮವಿದೆ. ರಾಜ್ಯ ಸರ್ಕಾರ ಮತ್ತು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾತುಕತೆ ನಡೆಸಿ ಎಚ್ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭ ಮಾಡಲು ಮುಂದೆ ಬಂದರೆ ಪರಿಗಣಿಸುವುದಾಗಿಯೂ ಇದೇ ಸಂದರ್ಭ ಹೇಳಿದರು.