ಬೆಂಗಳೂರು: ಒಂದೆಡೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದರೆ ಮತ್ತೊಂದೆಡೆ ಮನೆ ಸುತ್ತಲೂ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಸುತ್ತಮುತ್ತಲ ಜನ ಇತ್ತ ಕುತೂಹಲದಿಂದ ಇಣುಕಿ ಹೋಗುತ್ತಿದ್ದಾರೆ. ಮತ್ತೊಂದೆಡೆ ಮನೆಯೊಳಗೆ ಸಿಲುಕಿರುವ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬ ಮನೆಯ ಮಹಡಿಯಿಂದಲೇ ಹೊರಕ್ಕೆ ಇಣುಕಿ ನೋಡುತ್ತಾ ತಮಗೆ ಒದಗಿ ಬಂದ ದುರ್ದೈವಕ್ಕೆ ಹಿಡಿ ಶಾಪ ಹಾಕಿಕೊಳ್ಳುತ್ತಿದ್ದಾರೆ. ಅವರ ಮುಖದಲ್ಲಿ, ನೋವು, ದುಗುಡ, ಆತಂಕ ಎಲ್ಲವೂ ಎದ್ದು ಕಾಣುತ್ತಿದೆ.
ಪೊಲೀಸರು ಒಂದೆಡೆ ಬೀಡು ಬಿಟ್ಟಿದ್ದರೆ, ಮತ್ತೊಂದೆಡೆ ಮಾಧ್ಯಮದವರು ಠಿಕಾಣಿ ಹೂಡಿ ಕ್ಷಣ ಕ್ಷಣದ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಲ್ಲಿ ಏನು ಕಂಡರೂ, ಮಾಡಿದರೂ ಅದೆಲ್ಲವೂ ಸುದ್ದಿಯಾಗುತ್ತಿದೆ. ಈಗಾಗಲೇ ವಶಪಡಿಸಿಕೊಂಡಿರುವ ದಾಖಲೆಗಳ ಸಂಬಂಧ ಅಧಿಕಾರಿಗಳು ಡಿಕೆಶಿ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಡಿಕೆಶಿ ಬೆಂಬಲಿಗರು, ಆಪ್ತರು, ಸಂಬಂಧಿಕರು ಸೇರಿದಂತೆ ಸುಮಾರು 69 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ವಿವಿಧ ದಾಖಲೆಗಳ ಸಂಬಂಧ ಡಿಕೆಶಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ವಿವಿಧೆಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳು, ಬ್ಯಾಂಕ್ ಪಾಸ್ ಬುಕ್ಗಳು, ವಿವಿಧ ಬ್ಯಾಂಕ್ಗಳಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿಗಳು, ಆಸ್ತಿ ಮತ್ತಿತರ ದಾಖಲೆ ಪತ್ರಗಳ ಸಮೇತ ಅಧಿಕಾರಿಗಳು ಇಂದು ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಆಗಮಿಸಿ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಡಿಕೆಶಿ ಅವರ ಆಪ್ತ ಗುರುಗಳಾದ ದ್ವಾರಕನಾಥ್ ಅವರ ನಿವಾಸದ ಮೇಲೆ ನಡೆದ ದಾಳಿ ಮುಗಿದಿದ್ದು, ಪರಿಶೀಲನೆಗಾಗಿ ದಾಖಲಾತಿಗಳನ್ನು ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇನ್ನು ಡಿಕೆಶಿ ಆಪ್ತರು ಹಾಗೂ ಅವರೊಂದಿಗೆ ವಾಣಿಜ್ಯ ವಹಿವಾಟು ನಡೆಸುತ್ತಿದ್ದವರು, ಅವರ ಉದ್ಯಮದ ಪಾಲುದಾರರು ಎಲ್ಲರ ವಿವರಗಳನ್ನು ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ನಡುವೆ ಡಿಕೆಶಿ ವಿರುದ್ಧ ವಿದೇಶಿ ಹಣ ವಿನಿಮಯದ ಬಗ್ಗೆ ಇಡಿಗೆ ದೂರು ಕೂಡ ದಾಖಲಾಗಿದೆ. ಇದೆಲ್ಲ ಬೆಳವಣಿಗೆಯಿಂದಾಗಿ ಡಿಕೆಶಿ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಕಳೆದ ಮೂರು ದಿನಗಳಿಂದ ಮನೆಯೊಳಗೆ ಹೊರ ಪ್ರಪಂಚದ ಸಂಪರ್ಕದಿಂದ ದೂರವಾಗಿರುವ ಡಿ.ಕೆ.ಶಿವಕುಮಾರ್ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಆರೋಗ್ಯದಲ್ಲಿಯೂ ಏರಿಳಿತಗಳಾಗಿವೆ. ಇದುವರೆಗೆ ಕಂಡು ಕೇಳರಿಯದ ದಾಳಿ ಇದಾಗಿದ್ದು, ಕಾಂಗ್ರೆಸ್ನ ಪ್ರಭಾವಿ ನಾಯಕನ ಮೇಲೆ ನಡೆದ ದಾಳಿಯಿಂದಾಗಿ ಪಕ್ಷದ ಜಂಘಾಬಲವೇ ಹುದುಗಿ ಹೋದಂತಾಗಿದೆ. ಮುಂದೇನಾಗುತ್ತೇ ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿರುವುದು ಕಂಡು ಬರುತ್ತಿದೆ