ಬೆಂಗಳೂರು: ರಾಜ್ಯ ಹೈಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಎನ್.ಜಿ.ಟಿ ಆದೇಶಗಳಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ತನ್ನ ವ್ಯಾಪ್ತಿಯ ಶೇ 90 ರಷ್ಟು ಪ್ರವಾಹ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆಗಳ ನಿರ್ವಹಣೆ, ಹೂಳು ತೆಗೆಯುವ ಹಾಗೂ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಕೆ ಕಾರ್ಯಕ್ರಮಗಳಲ್ಲಿ ಶೇ 90 ರಷ್ಟ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯ ಸಂದರ್ಭದಲ್ಲಿ ಹೆಚ್ಚಿನ ತೊಂದರೆ ಎದುರಾಗಿಲ್ಲ ಎಂದು ತಿಳಿಸಿದೆ.
ಬಸವನಗುಡಿಯ ಕಿರಣ್ ವಿಶ್ವನಾಥ್ ಎಂಬ ನಾಗರಿಕರೊಬ್ಬರು ಪ್ರವಾಹದಿಂದ ಉಂಟಾಗುತ್ತಿರುವ ಸಾವು – ನೋವು, ಜನರ ಜೀವ, ಜೀವನ ರಕ್ಷಣೆಗೆ ಕೈಗೊಂಡಿರುವ ಕೈಗೊಂಡಿರುವ ಕ್ರಮಗಳ ಕುರಿತು ಬರೆದ ಪತ್ರಕ್ಕೆ ಬಿಬಿಎಂಪಿಯ ಮುಖ್ಯ ಅಭಿಯಂತರರ ಕಚೇರಿ ಸಮಗ್ರ ಮಾಹಿತಿ ನೀಡಿದೆ. ಅಷ್ಟೇ ಏಕೆ ರಾಜಕಾಲುವೆಗಳ ಮೇಲೆ ನಡೆದಾಡುವುದನ್ನು ಸಹ ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ನಿಗಾ ಇಡಲಾಗಿದೆ ಎಂದು ತಿಳಿಸಿದೆ.
ಬೃಹತ್ ಮಳೆ ನೀರು ಗಾಲುವೆಗಳಲ್ಲಿ ಹೂಳು ತೆಗೆಯಲು 3 ವರ್ಷಗಳಿಗೆ ಅನ್ವಯವಾಗುವಂತೆ ವಾರ್ಷಿಕ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ರಾಜಾ ಕಾಲುವೆಗಳಲ್ಲಿ ಹೂಳು ತೆಗೆಯಲಾಗುತ್ತಿದೆ. ಬಿಬಿಎಂಪಿಯಿಂದ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಮಳೆ ನೀರಿನ ಪ್ರವಾಹ ಪರಿಸ್ಥಿತಿಯನ್ನು ಶೇ 90 ರಷ್ಟು ತಡೆಗಟ್ಟಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಹ ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಏಕಕಾಲಕ್ಕೆ ಅನುದಾನ ಒದಗಿಸಿದೆ. ಪ್ರವಾಹ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ – ಎನ್.ಜಿ.ಟಿ ನೀಡಿರುವ ಆದೇಶವನ್ನು ಉಲ್ಲೇಖಿಸಿ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಸಹ 2019 ರ ಏಪ್ರಿಲ್ 2 ರಂದು ಆದೇಶ ಹೊರಡಿಸಿದ್ದು, ಇದರ ಅನ್ವಯ ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೇ ಪ್ರವಾಹ ಸಂದರ್ಭಗಳಲ್ಲಿ ಚರಂಡಿ ಮತ್ತು ಕಾಲುವೆಗಳಿಗೆ ಜನ ಜಾನುವಾರುಗಳು ಬಿದ್ದು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವಂತೆ ಸೂಚಿಸಿತ್ತು. ಇದರ ಜತೆಗೆ ಎನ್.ಜಿ.ಟಿ ಈ ವರ್ಷದ ಫೆಬ್ರವರಿ 22 ರಂದು ನೀಡಿದ್ದ ಆದೇಶವನ್ನು ಪರಿಪಾಲನೆ ಮಾಡುತ್ತಿರುವುದಾಗಿಯೂ ಬಿಬಿಎಂಪಿ ಹೇಳಿದೆ. ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳು ಪ್ರಸ್ತುತ ಇಂತಹ ಸಂದರ್ಭದಲ್ಲೂ ಬಿಬಿಎಂಪಿ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಪ್ರಗತಿ ಸಾಧಿಸಿದೆ. ಒಟ್ಟಾರೆ ನ್ಯಾಯಾಲಯಗಳ ತೀರ್ಪು ಅನುಷ್ಠಾನಗೊಳಿಸಲು ಬಿಬಿಎಂಪಿ ಕಾರ್ಯೋನ್ಮುಖವಾಗುತ್ತಿರುವ ಬಗ್ಗೆ ಕಿರಣ್ ಸಂತಸ ವ್ಯಕ್ತಪಡಿಸಿದ್ದಾರೆ.