ಬೆಂಗಳೂರು : ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವಂತೆ ಹೈಕೋರ್ಟ್ ತರಾಟೆ ತೆಗೆದುಕೊಂಡ ಮೇಲೆ ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ನೊಟೀಸ್ ನೀಡಿದೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನನಗೆ ಯಾವುದೇ ನೊಟೀಸ್ ಬಂದಿಲ್ಲ ಎಂದರು.
ನನಗೆ ಯಾವ ನೋಟಿಸ್ ಬಂದಿಲ್ಲ. ಈವರೆಗೆ ಯಾಕೆ ನಮ್ಮ ಪಾದಯಾತ್ರೆ ತಡೆದಿಲ್ಲ. ಸಭೆ ಬಳಿಕ ಪಾದಯಾತ್ರೆ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಇಂದು ಬೆಳಗ್ಗೆ 10 ಗಂಟೆಗೆ ರಾಮನಗರದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ನಾಯಕರ ಸಭೆ ಕರೆದಿದ್ದು ಅಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರ ತಡೆಯುವುದಾದರೆ ತಡೆಯಲಿ ನೋಡೋಣ ಎಂದು ಪ್ರತಿಕ್ರಿಯಿಸಿ ರಾಮನಗರದತ್ತ ಹೊರಟರು.
ಪಾದಯಾತ್ರೆ ಮುಂದುವರಿಕೆ: ಡಿವೈಎಸ್ಪಿಯವರು, ಕೆಲವು ಅಧಿಕಾರಿಗಳು ರಾತ್ರಿ 12 ಗಂಟೆಗೆ ಬಂದು ಪಾದಯಾತ್ರೆ ಮುಂದುವರಿಸಬಾರದು ಎಂದು ನೊಟೀಸ್ ನೀಡಿ ಹೋಗಿದ್ದಾರೆ. ಶಿಷ್ಠಾಚಾರ ಪ್ರಕಾರ 48 ಗಂಟೆಯೊಳಗೆ ಪಾಲಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಸಹಿ ಮಾಡಿ ಒಂದು ನೊಟೀಸ್ ನೀಡಿದ್ದಾರೆ, ನಾವು ಆ ನೊಟೀಸ್ ನ್ನು ಮುಟ್ಟಿಲ್ಲ.
ಈಗಾಗಲೇ ಘೋಷಣೆ ಮಾಡಿದಂತೆ ಇಂದು 5ನೇ ದಿನ ನಮ್ಮ ಪಾದಯಾತ್ರೆ ಮುಂದುವರಿಯಲಿದೆ. ನಮ್ಮ ಮಾಹಿತಿಯನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ನೀಡುತ್ತೇವೆ ಎಂದು ಇಂದು ಕನಕಪುರದಲ್ಲಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.