ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರು ಕಳೆದ ಕೆಲವು ತಿಂಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ನಾಪತ್ತೆಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಚಾರ ಸಮಿತಿ ಸಭೆಗೆ ಕೂಡ ರಮ್ಯಾ ಅವರು ಹಾಜರಾಗಿಲ್ಲ. ಇದರಿಂದಾಗಿ ಅವರು ಎಲ್ಲಿದ್ದಾರೆ ಮತ್ತು ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ಕಾಡಿದೆ.
ಮುಂದಿನ ಲೋಕಸಭೆ ಚುನಾವಣೆಗೆ ರಚಿಸಲಾಗಿರುವಂತಹ ಪ್ರಚಾರ ಸಮಿತಿಗೆ ರಮ್ಯಾ ಅವರನ್ನು ಕೂಡ ಆಯ್ಕೆ ಮಾಡಲಾಗಿದೆ. ಆದರೆ ಈಗ ರಮ್ಯಾ ಅವರು ಪಕ್ಷದ ಸಭೆಗೂ ಹಾಜರಾಗದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.
ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರು ಕೆಲವು ತಿಂಗಳ ಮೊದಲು ಟ್ವಿಟರ್ ಖಾತೆಯಿಂದ ಇದನ್ನು ತೆಗೆದುಹಾಕಿದ್ದರು. ಆದರೆ ಇದರ ಕೆಲವು ದಿನಗಳ ಬಳಿಕ ಮತ್ತೆ ಅದೇ ಪ್ರೊಪೈಲ್ ಹಾಕಿಕೊಂಡಿದ್ದರು.