ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದು ಸೂಕ್ತ ಸಮಯವೆಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಕೈಜೋಡಿಸುವಂತೆ ಬೃಹತ್ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಸಮಸ್ಯೆ ಬಗೆಹರಿಸಲು ಮೂರು ಮಾರ್ಗಗಳಿವೆ. ಸಂಯುಕ್ತ ಅಧಿವೇಶನದ ಮೂಲಕ ಸಮಸ್ಯೆ ಬಗೆಹರಿಸಬಹುದು. ಲೋಕಸಭೆ- ರಾಜ್ಯಸಭೆ ಅಧಿವೇಶನದಲ್ಲಿ ತೀರ್ಮಾನಿಸಬಹುದು. ಮಂದಿರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಲಿ ಎಂದರು.
ಸುಪ್ರೀಂಕೋರ್ಟ್ ಬೇಗನೆ ಆದೇಶ ಹೊರಡಿಸಲಿ. ಒಂದು ವರ್ಷದ ಒಳಗೆ ರಾಮಮಂದಿರ ಆಗಬೇಕು. ಸುಪ್ರೀಂಕೋರ್ಟ್ ಜನಾಭಿಪ್ರಾಯದಂತೆ ಶೀಘ್ರ ತೀರ್ಮಾನಿಸಲಿ. ಎಲ್ಲದಕ್ಕೂ ನ್ಯಾಯಾಲಯವನ್ನು ಕಾಯುವುದಕ್ಕೆ ಸಾಧ್ಯವಿಲ್ಲ ಎಂದರು. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ. ದೃಢ ನಿರ್ಧಾರ ಕೇಂದ್ರ ಸರ್ಕಾರಕ್ಕೂ ಅನುಕೂಲವಾಗಲಿದೆ. ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ ಎಂದು ಶ್ರೀಗಳು ಹೇಳಿದರು.
ಚುನಾವಣೆ ಹತ್ತಿರ ಇರುವುದರಿಂದ ಯಾರು ವಿರೋಧ ಮಾಡಲಿಕ್ಕಿಲ್ಲ. ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ. ಕಾಂಗ್ರೆಸ್ ತಟಸ್ಥವಾಗಿ ಎಲ್ಲವನ್ನೂ ನೋಡುತ್ತಿದೆ. ಕಾಂಗ್ರೆಸ್ ಬೆಂಬಲಿಸುವ ಅಥವಾ ವಿರೋಧಿಸಲೂ ಹೋಗುತ್ತಿಲ್ಲ. ಮಂದಿರ ನಿರ್ಮಾಣಕ್ಕೆ ಈಗ ಅನುಕೂಲವಾದ ವಾತಾವರಣವಿದೆ ಎಂದ ಶ್ರೀಗಳು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ವಿರೋಧಿಸಿದರೆ ಪಕ್ಷಕ್ಕೆ ಪ್ರತಿಕೂಲ ಆಗಬಹುದು. ರಾಮಮಂದಿರ ಭಾವನಾತ್ಮಕ ವಿಚಾರ. ನಾಲ್ಕೂವರೆ ವರ್ಷ ಆಯ್ತು ಇನ್ನು ಮಂದಿರ ಆಗಿಲ್ಲ. ನಾವು ಕಾದಿದ್ದೇವೆ.. ಈಗ ಒತ್ತಾಯ ಮಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಚರ್ಚೆ ಮಾಡುತ್ತಿಲ್ಲ ಎಂದರು.
ಸಂತರಿಗೆ ಚುನಾವಣೆಯ ಯಾವುದೇ ಅಗತ್ಯವಿಲ್ಲ. ಚುನಾವಣೆ ನಂತರ ಮುಂದೇನು ಎಂಬ ಪರಿಸ್ಥಿತಿ ಗೊತ್ತಿಲ್ಲ. ಈಗಲೇ ಮಂದಿರ ನಿರ್ಮಾಣ ಮಾಡಿ ಎಂದು ಶ್ರೀಗಳು ಸರ್ಕಾರಕ್ಕೆ ಆಗ್ರಹಿಸಿದರು.