ಬೆಂಗಳೂರು: ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ನಾಡಧ್ವಜದ ಕುರಿತು ಕನ್ನಡ ಸಂಘಟನೆಗಳ ಮುಖಂಡರು ಸಿಎಂ ಸಿದ್ದರಾಮಯ್ಯ ಜತೆ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದು, ಈ ವೇಳೆ ನಾಡಧ್ವಜಕ್ಕೆ ಸಾಹಿತಿಗಳು, ಹೋರಾಟಗಾರರು ಸಮ್ಮತಿ ಸೂಚಿಸಿದರು.
ನಾಡಧ್ವಜದಲ್ಲಿ ಹಳದಿ, ಬಿಳಿ ಹಾಗೂ ಕೆಂಪು ಬಣ್ಣದ ಮಧ್ಯೆ ಸರಕಾರದ ಲಾಂಛನ ಇದ್ದ ನಾಡಧ್ವಜವನ್ನು ಸಿಎಂ ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಶೀಘ್ರವೇ ನಾಡಧ್ವಜದ ವಿನ್ಯಾಸ ಮತ್ತು ವಿವರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆಯಲಾಗುವುದು’ ಎಂದರು.
ನಾಡಧ್ವಜದ ವಿನ್ಯಾಸವನ್ನು ಸಾಹಿತಿ ಹಂಪನಾಗರಾಜಯ್ಯ ರಚಿಸಿದ್ದರು. ಗುರುವಾರ ನಾಡಧ್ವಜ ವಿನ್ಯಾಸವನ್ನು ರಾಜ್ಯ ಸಂಪುಟ ಸಭೆಗೆ ಹಸ್ತಾಂತರಿಸಲಾಯಿತು.