ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ವಿಚಾರಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆರೋಪಿಯನ್ನು ರಕ್ಷಿಸುವುದಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಯುವತಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಪತ್ರ ಬರೆದು ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಆರೋಪಿಯನ್ನು ಕೇವಲ ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ. ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಹೇಳಿ ವಾಪಸ್ ಕಳುಹಿಸಿದ್ದಾರೆ. ಅವರು ಮುಕ್ತವಾಗಿ ಓಡಾಡಲು ಎಸ್ಐಟಿ ಅವಕಾಶ ನೀಡಿದೆ ಎಂದು ಆರೋಪಿಸುತ್ತಿರುವ ಯುವತಿ ನನಗೆ ಒಂದು ದಿನವೂ ಬಿಡದೆ ವಿಚಾರಣೆ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ನನ್ನ ಹೆಸರಿಲ್ಲ. ನನ್ನ ಹೆಸರು ಉಲ್ಲೇಖವಾಗದಿದ್ದರೂ ಪಿಜಿಯಲ್ಲಿ ಪರಿಶೀಲನೆ ಮಾಡಿ ಸಾಕ್ಷಿಯನ್ನು ನಾಶ ಮಾಡಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದ್ದಾರೆ. ಈವರೆಗೂ ನನ್ನನ್ನು ತೇಜೋವಧೆ ಮಾಡುವ ಸುದ್ದಿ ಪ್ರಸಾರವಾಗುತ್ತಿವೆ. ನಾನು ಪ್ರಕರಣದ ದೂರುದಾರಳಾಗಿದ್ದರೂ ನನ್ನ ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ ರಮೇಶ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನನಗೆ ತೀವ್ರ ಆತಂಕ ಮೂಡಿಸಿದೆ. ನನ್ನ ಸಹಮತ ಪಡೆಯದೆ ಪಿಪಿ ನೇಮಕ ಮಾಡಲಾಗಿದೆ. ಇಡೀ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ಈ ಪ್ರಕರಣದ ತನಿಖೆ ಮೇಲೆ ನಂಬಿಕೆ ಇಲ್ಲದಂತಾಗಿದೆ. ಸರ್ಕಾರದ ಒತ್ತಡಕ್ಕೆ ಮಣಿಯದೆ ನನಗೆ ನ್ಯಾಯ ಕೊಡಿಸಿ. ನ್ಯಾಯಸಮ್ಮತ ವಿಚಾರಣೆ ನಡೆಸಬೇಕೆಂದು ಸಂತ್ರಸ್ತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಆರೋಪಿ ರಕ್ಷಿಸಿ ನನ್ನ ಚಾರಿತ್ರ್ಯ ವಧೆ ; ಪೋಲೀಸ್ ಆಯುಕ್ತರಿಗೆ ಸಿಡಿ ಸಂತ್ರಸ್ಥೆ ದೂರು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.