ಬೆಂಗಳೂರು: ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲೆ ಜಿಎಸ್ ಟಿ ವಿಧಿಸಿರುವ ಕ್ರಮ ಖಂಡಿಸಿ ರಂಗಕರ್ಮಿ ಪ್ರಸನ್ನ ಅವರು ನಗರದ ನಿಡುಮಾಮಿಡಿ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡಿರುವ ಸತ್ಯಾಗ್ರಹವನ್ನು ಬೆಂಬಲಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಗ್ರಾಮೀಣ ಭಾಗಗಳಿಗೆ ಜಿಎಸ್ ಟಿ ವಿಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಂಗಕರ್ಮಿ ಪ್ರಸನ್ನ ಅವರೊಂದಿಗೆ ಕೆಲಕಾಲ ಸತ್ಯಾಗ್ರಹದಲ್ಲಿ ಕೆಲಕಾಲ ಪಾಲ್ಗೊಂಡ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಗುಡಿಕೈಗಾರಿಕೆಗಳಿಗೆ ಜಿಎಸ್ಟಿ ವಿಧಿಸುವುದರಿಂದ ಗ್ರಾಮೀಣ ಜನಗರಿಗೆ ಅನ್ಯಾಯವಾಗುತ್ತದೆ. ಅವರ ಆದಾಯ ಒಂದೇ ರೀತಿ ಇರುವುದಿಲ್ಲ. ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲೆ ಜಿಎಸ್ ಟಿಗೆ ವಿನಾಯಿತಿ ನೀಡುವ ಮೂಲಕ ಆ ಉದ್ಯಮವನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ. ಹಿಂದುಳಿದವರು ಮತ್ತು ಬುಡಕಟ್ಟು ಜನರು ಇಂತಹ ಉದ್ಯಮವನ್ನು ಅವಲಂಬಿಸಿಕೊಂಡು ಬದುಕುತ್ತಿದ್ದು, ಅವರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದರು.
ಕಾಡಿಗೆ ಹೋಗಿ ಜೇನು ತರುತ್ತಾರೆ. ಬುಟ್ಟಿ ಹೆಣೆದು, ಮಡಿಕೆ-ಕುಡಿಕೆ ಮಾಡಿ ಜೀವನ ಸಾಗಿಸುತ್ತಾರೆ. ಇವರೆಲ್ಲರ ಬದುಕಿನ ಮೇಲೆ ಜಿಎಸ್ ಟಿ ಪರಿಣಾಮ ಬೀರುತ್ತದೆ. ಎಲ್ಲ ಪಕ್ಷಗಳವರೂ ಸೇರಿ ಜಿಎಸ್ ಟಿ ನಿರ್ಣಯ ಕೈಗೊಂಡಿದ್ದರೂ ಸಹ ಅದನ್ನು ಪ್ರಧಾನಿ ಅದನ್ನು ಮರು ಪರಿಶೀಲಿಸಿ ಗ್ರಾಮೀಣ ಪ್ರದೇಶದಲ್ಲಿ ಗುಡಿಕೈಗಾರಿಕೆಗಳಿಂದ ಜೀವನ ಸಾಗಿಸುವ ಜನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅವರನ್ನು ನಟ ಎಂದು ನಾನು ಟೀಕಿಸಿದ್ದರಲ್ಲಿ ತಪ್ಪೇನಿಲ್ಲ, ಅದು ಅವಮಾನದ ಪದವೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕಿಸುವ ಹಕ್ಕು ಎಲ್ಲರಿಗೂ ಇರುವುದಾಗಿ ಹೇಳಿದರು.