News Karnataka Kannada
Friday, May 03 2024
ಬೆಂಗಳೂರು ನಗರ

ಕಾಫಿ ಉದ್ಯಮ ಪುನಶ್ಚೇತನಕ್ಕೆ ಪ್ಯಾಕೇಜ್‌: 6 ತಿಂಗಳಾದರೂ ಅನುಮೋದನೆ ನೀಡದ ಕೇಂದ್ರ ಸರ್ಕಾರ

Cofee Board
Photo Credit :

ಬೆಂಗಳೂರು, ಜೂ.1: ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಪ್ರತೀ ವರ್ಷವೂ .ತೆರಿಗೆ ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಆದಾಯವನ್ನು ತಂದು ಕೊಡುತ್ತಿರುವ ಕಾಫಿ ಉದ್ಯಮ ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ , ರೋಗ. ಭಾಧೆ , ಏರಿದ ಉತ್ಪಾದನಾ ವೆಚ್ಚ ಮತ್ತು ಕಾರ್ಮಿಕರ ಕೊರತೆಯಂತಹ ಕಾರಣಗಳಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ಕಾಫಿ ಬೆಳೆಗಾರರ ಮತ್ತು ಕಾಫಿ ಕೃಷಿಯ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಕಾಫಿ ಮಂಡಳಿಯು ಬೆಳೆಗಾರರಿಗೆ ಅನೇಕ ಅನುಕೂಲಗಳನ್ನು ಕಲ್ಪಿಸಿಕೊಟ್ಟಿದೆ. ಪ್ರಸ್ತುತ ಸಾಮಾನ್ಯ ವರ್ಗದ ಬೆಳೆಗಾರರಿಗೆ ಕಾಫಿ ಗಿಡಗಳ ಮರುನಾಟಿ , ಕೆರೆ ಬಾವಿ ನಿರ್ಮಾಣ ಮತ್ತು ಸ್ಪ್ರಿಂಕ್ಲರ್‌ ಖರೀದಿಗಾಗಿ ಮಾತ್ರ ಶೇಕಡಾ 40 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 5 ಎಕರೆ ಒಳಗಿರುವ ಕಾಫಿ ಬೆಳೆಗಾರರಿಗೆ ಗೋದಾಮು , ಕೆರೆ ನಿರ್ಮಾಣ, ಕಾಫಿ ಕಣ ಮತ್ತು ಸ್ಪ್ರಿಂಕ್ಲರ್‌ ಖರೀದಿಗೆ ಶೇಕಡಾ 90 ರ ವರೆಗೆ ಮತ್ತು 10 ಎಕರೆ ತೋಟ ಹೊಂದಿರುವ ದಲಿತ ಕಾಫಿ ಬೆಳೆಗಾರರಿಗೆ ಶೇಕಡಾ 75 ರಷ್ಟು ಸಹಾಯಧನ ನೀಡಲಾಗುತ್ತಿದೆ.

ಕೋವಿಡ್‌ ಹಾಗೂ ಏರಿದ ಉತ್ಪಾದನಾ ವೆಚ್ಚದ ಕಾರಣದಿಂದ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ನಿಲ್ಲಬೇಕಾದದ್ದು ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯು ಕೇಂದ್ರ ಸರ್ಕಾರಕ್ಕೆ 1200 ಕೋಟಿ ರೂಪಾಯಿಗಳ ಪಂಚ ವಾರ್ಷಿಕ
ಪ್ಯಾಕೇಜ್‌ ನ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಪ್ರಸ್ತಾವನೆಯು 6 ತಿಂಗಳಿನಿಂದ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಧೂಳು ಹಿಡಿಯುತ್ತಿದೆ. ಕೇಂದ್ರವು ಇದಕ್ಕೆ ಅನುಮೋದನೆ ನೀಡಿದರೆ ಮಾತ್ರ ಬೆಳೆಗಾರರಿಗೆ ಹೆಚ್ಚಿನ ಸವಲತ್ತನ್ನು ಸಬ್ಸಿಡಿ
ರೂಪದಲ್ಲಿ ನೀಡಬಹುದಾಗಿದೆ.

ಈ ಕುರಿತು ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ ಜಿ ಜಗದೀಶ್‌ ಅವರನ್ನು ಮಾತಾಡಿಸಿದಾಗ 1200 ಕೋಟಿ ರೂಪಾಯಿಗಳ ಪ್ರಸ್ತಾವಣೆಯನ್ನು ಕಳುಹಿಸಿ 6 ತಿಂಗಳಾಗಿರುವುದನ್ನು ಧೃಢಪಡಿಸಿದರು. ಈ ಬಾರಿ ಬೆಳೆಗಾರರಿಗೆ ಪ್ರಸ್ತುತ
ನೀಡಲಾಗುತ್ತಿರುವ ಸಬ್ಸಿಡಿ ಮೊತ್ತವನ್ನು ಶೇಕಡಾ 40 ರಿಂದ ಶೇಕಡಾ 50 ಕ್ಕೆ ಏರಿಸುವಂತೆಯೂ , ಬೆಳೆಗಾರರಿಗೆ ಯಂತ್ರೋಪಕರಣ , ಹೊಸ ತೋಟ ಸೇರಿದಂತೆ ಬಹುತೇಕ ಎಲ್ಲ ಅಭಿವೃದ್ದಿ ಕಾರ್ಯಗಳಿಗೂ ಸಬ್ಸಿಡಿ ನೀಡುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ನೀತಿ ಆಯೋಗದ ಮೂಲಕ ವಿವಿಧ ಬೆಳೆಗಾರರ ಸಂಕಷ್ಟ ಅರಿಯಲು ಮತ್ತು ಸವಲತ್ತುಗಳನ್ನು ನೀಡಲು NILERD ( National Institute of Labour Economics Research and Development) ಸಂಸ್ಥೆಯ ಅಧಿಕಾರಿಗಳನ್ನು ಖುದ್ದಾಗಿ ಬೆಳೆಗಾರರ ಜತೆ ಚರ್ಚೆಗೆ ಅನುವು ಮಾಡಿಕೊಟ್ಟಿದ್ದು , ಆ ಸಂಸ್ಥೆ ವರದಿ ನೀಡಿದ ನಂತರ ಪ್ರಸ್ತಾವನೆ ಅನುಮೋದನೆ ಗೊಳ್ಳುವ ಸಾದ್ಯತೆ ಇದೆ ಎಂದರು. ಅಲ್ಲದೆ ಬೆಳೆಗಾರರಿಗೆ ಈ ಹಿಂದೆ ನೀಡುತ್ತಿರುವ ಸವಲತ್ತುಗಳನ್ನೇ ಮುಂದುವರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು ಈಗ ಸಲ್ಲಿಸಲಾಗಿರುವ ಪ್ರಸ್ತಾವನೆಯಲ್ಲಿ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಆಗುವ ಯೋಜನೆಗಳನ್ನು ಸೇರಿಸಲಾಗಿದೆ ಎಂದೂ ಅವರು ತಿಳಿಸಿದರು.

ಸಾಮಾನ್ಯವಾಗಿ ಕಾಫಿ ಮಂಡಳಿಯು ಐದು ವರ್ಷಗಳಿಗೊಮ್ಮೆ ತನ್ನ ವೆಚ್ಚದ , ಬೆಳೆಗಾರರ ಯೋಜನೆಗಳ ಕುರಿತ ಪ್ರಸ್ತಾವನೆಯನ್ನು ಸಲ್ಲಿಸುತ್ತದೆ. ಈ ಹಿಂದೆ 2017 ರಲ್ಲಿ 780 ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಬಾರಿ ಮೊತ್ತ 1200 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಈ ಕುರಿತು ದೆಹಲಿಯ ಪ್ರಧಾನ ಮಂತ್ರಿಗಳ ಕಾರ್ಯಾಲಯ (prime ministers office) ಮೂಲಗಳಿಂದ ಮಾಹಿತಿ ಪಡೆದಾಗ ಯಾವುದೇ ಇಲಾಖೆಯ 1000 ಕೋಟಿ ರೂಪಾಯಿ ಒಳಗಿನ ಪ್ರಸ್ತಾವಣೆಗಳಿಗೆ ಆಯಾ ಇಲಾಖಾ ಮಂತ್ರಿಗಳು ಮತ್ತು ಇಲಾಖಾ ಮುಖ್ಯಸ್ಥರು ಹಣಕಾಸು ಇಲಾಖೆಯ ಒಪ್ಪಿಗೆಯೊಂದಿಗೆ ಅನುಮೋದನೆ ನೀಡಬಹುದಾಗಿದೆ.

ಆದರೆ 1000 ಕೋಟಿ ಮೀರಿದ ಯೋಜನೆ , ಪ್ರಸ್ತಾವನೆಗಳಿಗೆ ಖುದ್ದು ಪ್ರದಾನ ಮಂತ್ರಿಗಳೇ ಅನುಮೋದನೆ ನೀಡಬೇಕಿದ್ದು ಸದ್ರಿ ಕಡತ ಈಗ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪರಿಶೀಲನೆಯಲ್ಲಿದೆ. ಪ್ರಧಾನ ಮಂತ್ರಿಗಳ ಕೃಷಿ ಕಾರ್ಯದರ್ಶಿಗಳು ಈ ಪ್ರಸ್ತಾವನೆಗೆ ಅಡ್ಡಗಾಲು ಹಾಕಿದ್ದಾರೆ ಎಂಬ ಮಾತೂ ಕೇಳಿ ಬಂದಿದೆ. ಈ 1200 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಇದರ ಅಧೀನದಲ್ಲೇ ಬರುವ ವೆಚ್ಚ ಸಚಿವಾಲಯ , ಕೃಷಿ ಸಚಿವಾಲಯ ಮತ್ತು ವಾಣಿಜ್ಯ ಸಚಿವಾಲಯಗಳು ತಮ್ಮ ಅನುಮೋದನೆಯನ್ನು ನೀಡಿವೆ. ಆದರೆ ಕಡತ ಇನ್ನೂ ಪ್ರಧಾನಿ ಕಾರ್ಯಾಲಯದಿಂದ ಅನುಮೋಧನೆಗೊಳ್ಳದಿರಲು ಸರ್ಕಾರದ ಮೇಲೆ ಒತ್ತಡ ಹೇರದಿರುವುದೇ ಕಾರಣ ಎನ್ನಲಾಗಿದೆ.

ದೇಶದ ಪ್ರಮುಖ ಬೆಳೆಗಳಾದ ಟೀ , ಸಕ್ಕರೆ , ಹತ್ತಿ ಬೆಳೆಗಾರರ ಪರ ಪ್ರಬಲ ಲಾಭಿಯೇ ಇದೆ ಆದರೆ ಈ ರೀತಿಯ ಬೆಂಬಲ ಕಾಫಿಗೆ ಇಲ್ಲ, ಆ ಬೆಳೆಗಾರರ ಹಿಂದೆ ಲೋಕಸಭಾ ಸದಸ್ಯರ ಹಿಂಡೇ ಇದ್ದು ಸರ್ಕಾರದ ಮೇಲೆ ಒತ್ತಡ ಹೇರಿ ಸವಲತ್ತು ಪಡೆಯುತ್ತಾರೆ.
ಆದರೆ ಕಾಫಿ ಬೆಳೆಯುವ ಕೊಡಗು , ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಶಾಸಕರು ಮತ್ತು ಲೋಕ ಸಭಾ ಸದಸ್ಯರು ಈ ಕುರಿತು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಆರು ತಿಂಗಳಿನಿಂದ ಕಡತ ಪಿಎಂಓ ನಲ್ಲಿ ಬಾಕಿ ಉಳಿದುಕೊಂಡಿದೆ ಎನ್ನಲಾಗಿದೆ. ಸುದೀರ್ಘ ನಿದ್ರೆಯಲ್ಲಿರು ಜನಪ್ರತಿನಿಧಿಗಳು ಇನ್ನಾದರೂ ದನಿ ಎತ್ತಿ ಕರ್ತವ್ಯ ಪರತೆ ಮೆರೆದು ಬೆಳೆಗಾರರಿಗೆ ಸವಲತ್ತು ಒದಗಿಸಲು ಮುಂದಾಗಬೇಕಿದೆ. .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು