ಬೆಂಗಳೂರು : ಜೆ.ಜೆ. ನಗರದಲ್ಲಿ ಎರಡು ಬೈಕ್ಗಳು ಡಿಕ್ಕಿಯಾಗಿದ್ದಕ್ಕೆ ಶುರವಾದ ಜಗಳದಲ್ಲಿ 22 ವರ್ಷದ ಯುವಕ ಚಂದ್ರು ಕೊಲೆಯಾದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕನ್ನಡ ಮಾತನಾಡಿದ್ದಕ್ಕೆ ಚಾಕುವಿನಿಂದ ದುಷ್ಕರ್ಮಿಗಳು ದಲಿತ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಕಾಟನ್ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು (22) ಕೊಲೆಯಾದವ. ಆರೋಪಿ ಶಾಹಿದ್ ಸೇರಿ ಮೂವರನ್ನು ಜೆ.ಜೆ. ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರು ಕಳೆದ ಒಂದು ತಿಂಗಳಿನಿಂದ ಗೂಡ್ಸ್ಶೆಡ್ ರಸ್ತೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸ್ನೇಹಿತ ಸೈಮನ್ ಹುಟ್ಟುಹಬ್ಬ ಆಚರಿಸಲು ಸೋಮವಾರ ರಾತ್ರಿ ಆತನ ಮನೆಗೆ ಹೋಗಿದ್ದ. ಆ ವೇಳೆ ಚಿಕನ್ ರೋಲ್ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್ ಮುಂದಿನಿಂದ ಬರುತ್ತಿದ್ದ ಶಾಹಿದ್ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ.
ಈ ವೇಳೆ ಸರಿಯಾಗಿ ಬೈಕ್ ಚಲಾಯಿಸುವಂತೆ ಶಾಹಿದ್ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ.
ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳು ಹಲ್ಲೆ ನಡೆಸಿರುವ ದೃಶ್ಯ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಪೊಲೀಸರು ಶಾಹಿದ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ. ಶಾಹಿದ್ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದು, ವ್ಯಾಪಾರ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ.
ಬೈಕ್ ಡಿಕ್ಕಿಯಾಗಿದ್ದ ವಿಚಾರಕ್ಕೆ ಚಂದ್ರುವನ್ನ ಶಾಹಿದ್ ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೀಗ ಇದರ ಅಸಲಿಯತ್ತು ಬೇರೆಯೇ ಇದೆ ಎಂದು ಗೃಹಸಚಿವರು ಹೇಳಿದ್ದಾರೆ. ಕನ್ನಡ ನಾಡಲ್ಲಿ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕನ್ನಡಿಗನ ಕೊಲೆಯಾಗಿದೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಹಿಜಾಬ್ ವಿಚಾರದಿಂದ ಬೇರೆ ಬೇರೆ ವಿವಾದ ಶುರುವಾಗಿದೆ. ವಿರೋಧ ಪಕ್ಷದವರು ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಾರೆ. ಅವರಿಗೆ ಜನರು ಶಾಂತಿಯುತವಾಗಿ ಇರುವುದು ಬೇಕಾಗಿಲ್ಲ. ಹೀಗೆ ಮಾಡುತ್ತಾ ಹೋದರೆ ನೆಲೆ ಕಳೆದುಕೊಳ್ಳುತ್ತಾರೆ. ಚಂದ್ರು ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದೆ. ಗಲಾಟೆ ವೇಳೆ ಉರ್ದು ಮಾತಾಡುವಂತೆ ಶಾಹಿದ್ ತಂಡ ಹೇಳಿದೆ. ಈ ವೇಳೆ ಉರ್ದು ಬರಲ್ಲ ಎಂದು ಕನ್ನಡದಲ್ಲೇ ಮಾತನಾಡಿದ ಚಂದ್ರುವನ್ನ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.