ಬೆಂಗಳೂರು, ಡಿ. 02 : ನಗರದಲ್ಲಿ ಕೊರೊನಾ ರೂಪಾಂತರಿ ಒಮಿಕ್ರೋನ್ ಆತಂಕ ಹೆಚ್ಚುತ್ತಿದ್ದಂತೆ ಬೆಂಗಳೂರಿನ ಸಂಪೂರ್ಣ ಜನತೆಗೆ ಲಸಿಕೆ ನೀಡಲು ಬಿಬಿಎಂಪಿ ಪಣ ತೊಟ್ಟಿದೆ.
ಎರಡೂ ಡೋಸ್ ಲಸಿಕೆ ಪಡೆಯದವರಿಗೆ ಸಿನಿಮಾ ಮಂದಿರ, ಮೆಟ್ರೋ, ಮಾಲ್, ಉದ್ಯಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಅವಕಾಶ ನೀಡದಿರುವ ಕುರಿತು ಚಿಂತನೆ ನಡೆಸಿದೆ.
ಮೂಲೆ ಸೇರಿದ್ದ ಕೊರೊನಾ ಒಂದ್ಕಡೆ ನಿಧಾನವಾಗಿ ಸವಾರಿ ಶುರುಮಾಡಿದೆ. ಮತ್ತೊಂದ್ಕಡೆ ಒಮಿಕ್ರಾನ್ ಆಂತಕ ಹೆಚ್ಚಾಗುತ್ತಿದೆ. ರೂಪಾಂತರಿ ತಡೆಗಟ್ಟುವುದು ಹೇಗೆ ಎನ್ನುವ ಪ್ರಶ್ನೆ ಶುರುವಾಗಿದೆ. ಹೀಗಾಗಿ ಎಚ್ಚೆತ್ತುಕೊಂಡಿರೋ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನಿನ್ನೆ ಕೊವಿಡ್ ತಜ್ಞರ ಸಮಿತಿ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ತಜ್ಞರು ಕೆಲ ಮಹತ್ವದ ಸಲಹೆಗಳನ್ನ ನೀಡಿದ್ದಾರೆ. ಆ ಎಲ್ಲಾ ಸಲಹೆಗಳನ್ನ ಜಾರಿಗೆ ತರಲು ವಿಶೇಷ ಆಯುಕ್ತರಿಗೆ ಬಿಬಿಎಂಪಿ ಆಯುಕ್ತ ಗುಪ್ತಾ ಸೂಚನೆ ನೀಡಿದ್ದಾರೆ.
ರಾಜ್ಯದ ಕ್ಲಸ್ಟ್ರರ್ ಮಟ್ಟದಲ್ಲಿ ಕೊರೊನ?ಆ ಸೋಂಕು ಪತ್ತೆಯಾದ್ರೆ ಸ್ಯಾಂಪಲ್ಸ್ನ್ನ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ಗೆ ಸ್ಯಾಂಪಲ್ಸ್ ಕಳುಹಿಸಬೇಕು. ಅದು ಕೂಡ INSACOG ಪ್ರಮಾಣಿತ ಲ್ಯಾಬ್ಗಳಿಗೆ ಕಡ್ಡಾಯವಾಗಿ ಸ್ಯಾಂಪಲ್ಸ್ ಕಳುಹಿಸಬೇಕು. ಅಂದ್ರೆ, ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸಿರುವ ಲ್ಯಾಬ್ಗಳಿಗೆ ಕಳುಹಿಸಬೇಕು. ಆದ್ರೆ, ಯಾವುದೇ ಕಾರಣಕ್ಕೂ ಖಾಸಗಿ ಪ್ರಯೋಗಾಲಯಗಳಿಗೆ ಸ್ಯಾಂಪಲ್ಸ್ ಕಳಿಸುವಂತಿಲ್ಲ.
ಈ ಬಗ್ಗೆ ಪ್ರಶ್ನಿಸಿದಾಗ ಗೌರವ್ ಗುಪ್ತಾ ಅವರು, ಒಮಿಕ್ರೋನ್ ಪ್ರವೇಶಿಸದಂತೆ ಎಚ್ಚರ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಸಭೆ ನಡೆಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರ ನೀಡುವ ನಿರ್ದೇಶನದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಉನ್ನತ ಮೂಲಗಳು ತಿಳಿಸಿವೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಅವರು, ಚಿತ್ರಮಂದಿರಗಳಿಗೆ ಶೇ.50ರಷ್ಟು ಹಾಜರಾತಿ, ಮಾಲ್ಗಳಿಗೆ ನಿರ್ಬಂಧ ವಿಧಿಸುವ ಯಾವುದೇ ಚಿಂತನೆ ಇಲ್ಲ ಎನ್ನುತ್ತಾರೆ.
ಆದರೆ, ಕೋವಿಡ್ ಎರಡೂ ಲಸಿಕೆ ಪಡೆದವರಿಗೆ ಮಾತ್ರ ಚಿತ್ರಮಂದಿರ ಹಾಗೂ ಮಾಲ್ಗಳಿಗೆ ಪ್ರವೇಶ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ರವಾನೆಯಾಗಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡುವುದಿಲ್ಲ. ಮೂಲಗಳು ಮಾತ್ರ ಇಂತಹ ಗಂಭೀರ ಚಿಂತನೆಯನ್ನು ಬಿಬಿಎಂಪಿ ನಡೆಸಿದೆ ಎಂದು ಹೇಳುತ್ತವೆ.
ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ಮಾತನಾಡಿ, ಸುಮಾರು 22 ಲಕ್ಷ ಮಂದಿ ಮೊದಲ ಡೋಸ್ಮತ್ತು 10 ಲಕ್ಷ ಜನರು ಎರಡನೇ ಡೋಸ್ ಲಸಿಕೆ ಪಡೆದಿಲ್ಲ. ಅವರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಲಸಿಕೆ ಪಡೆಯುವುದರಿಂದ ಕೊರೋನಾ ಸೋಂಕು ಮಾರಣಾಂತಿಕವಾಗದಂತೆ ತಡೆಯಲು ಸಹಕಾರಿಯಾಗಲಿದೆ.
ಹಾಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
”ಕೋವಿಡ್ ರೂಪಾಂತರಿ ವೈರಾಣುವಿನಿಂದ ವಿಶ್ವದಾದ್ಯಂತ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಆದ ಕಾರಣ, ತಜ್ಞರ ಸಮಿತಿಯು ನೀಡಿದ ಸೂಚನೆಯಂತೆ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಪರೀಕ್ಷೆ ಮಾಡಿ, ಕ್ವಾರಂಟೈನ್ಗೆ ಒಳಪಡಿಸಬೇಕು. ಸಂಗ್ರಹಿಸಿದ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಬೇಕು. ನಗರದಲ್ಲಿನ ಕಂಟೈನ್ಮೆಂಟ್ ವಲಯಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು,” ಎಂದರು.
ಬಿಬಿಎಂಪಿ ಅಧಿಕಾರಿಗಳು 198 ವಾರ್ಡ್ಗಳ ಮನೆ ಮನೆಗೂ ತೆರಳಿ ಲಸಿಕೆ ಹಾಕಿಸಿಕೊಳ್ಳದವರ ಪತ್ತೆ ಹಚ್ಚಿ ಲಸಿಕೆ ಪಡೆಯುವಂತೆ ತಿಳಿಸಲಿದ್ದಾರೆ. ಜೊತೆಗೆ ಮತದಾರರ ಗುರುತಿನ ಚೀಟಿ ವಿವರ ಪಡೆದು ಮ್ಯಾಪ್ಆಧಾರದಲ್ಲಿ ಎಲ್ಲರ ಮನೆಗಳಿಗೂ ಭೇಟಿ ನೀಡಲಿದ್ದಾರೆ. ಹಾಗೆಯೇ ಇದುವರೆಗೆ ಮೊದಲ ಮತ್ತು ಎರಡನೇ ಡೋಸ್ಲಸಿಕೆ ಪಡೆಯದವರ ವಿವರ ನಮ್ಮ ಬಳಿಯಲ್ಲಿದ್ದು, ಎಲ್ಲರಿಗೂ ಮೊಬೈಲ್ಗೆ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಗುವುದು. ಈ ಮೂಲಕ ಎಲ್ಲರೂ ಲಸಿಕೆ ಪಡೆಯುವಂತೆ ಬಿಬಿಎಂಪಿ ಸತತ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ತಜ್ಞರು ಮಹತ್ವಪೂರ್ಣವಾದ ಹಲವು ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ರಾಜ್ಯ ಸರ್ಕಾರ ರೂಪಿಸುವ ನಿಯಮಗಳನ್ನು ಬಿಬಿಎಂಪಿ ಪಾಲಿಸಲಿದೆ. ಎಲ್ಲ ವಲಯಗಳು ಮತ್ತು ವಿಭಾಗೀಯ ಅಧಿಕಾರಿಗಳು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಿದೇಶದಲ್ಲಿ ಹೊಸ ತಳಿ ಪತ್ತೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಂದ ರಾಜ್ಯಕ್ಕೆ ಆಗಮಿಸುವವರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಂದ ಪಡೆದು ಅಂತವರ ಮೇಲೆ ಹದ್ದಿನ ಕಣ್ಣಿಡುವ ಹೊಣೆಯನ್ನು ನಗರ 27 ವೈದ್ಯಕೀಯ ಆರೋಗ್ಯ ಅಧಿಕಾರಿಗಳಿಗೆ (ಎಂಓಎಚ್) ನೀಡಲಾಗಿದೆ.
ಜೊತೆಗೆ ಕೊರೋನಾ ಸೋಂಕು ತಪಾಸಣೆ ಕಾರ್ಯವನ್ನು ತೀವ್ರಗೊಳಿಸಿದ್ದೇವೆ. ವಿಮಾನ, ರೈಲು ಮತ್ತು ಬಸ್ಗಳಿಂದ ನಗರಕ್ಕೆ ಬರುವ ಎಲ್ಲಾ ಹೊರ ದೇಶ ಮತ್ತು ಹೊರ ರಾಜ್ಯಗಳ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.