ಬೆಂಗಳೂರು: ಇನ್ಮುಂದೆ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕವನ್ನು ವಿಧಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು, ಮಂತ್ರಾಲಯವು ಕಳುಹಿಸಿರುವ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಾಗೃತಿಯನ್ನು ಸಹ ಮೂಡಿಸಲಾಗುವುದು. ಆಹಾರವನ್ನು ಸಾರ್ವಜನಿಕರು ವ್ಯರ್ಥ ಮಾಡದಂತೆ ಕ್ರಮ ವಹಿಸಬೇಕು. ಮಿಕ್ಕ ಆಹಾರವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಬೇಕು. ಈ ಹಿಂದೆ ಹೋಟೆಲ್ ಗಳಲ್ಲಿ ಶೇ.6 ರಿಂದ 8 ರಷ್ಟು ಸೇವಾ ಶುಲ್ಕವನ್ನು ವಿಧಿಸುತ್ತಿದ್ದರು. ಯಾವುದೇ ಗ್ರಾಹಕನು ಹೋಟೆಲ್ ಗಳಲ್ಲಿ ಸೇವಾ ಶುಲ್ಕವನ್ನು ಹೇರಿಸುವುದರ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು. ಅದನ್ನು ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಅನಿಲ ರಹಿತ ಪಡಿತರ ಚೀಟಿದಾರರಿಗೆ ಉಚಿತ ಅನಿಲ ಸಂಪರ್ಕ ಒದಗಿಸಲು ಅನಿಲ ಭಾಗ್ಯ ವನ್ನು ಹಾಗೂ ಗ್ರಾಮೀಣ ಪ್ರದೇಶದ ಅನಿಲ ಪಡಿತರ ಚೀಟಿಗಳಿಗೆ ಅವರ ಆಯ್ಕೆ ಮೇರೆಗೆ ಪಡಿತರ ಸೀಮೆ ಎಣ್ಣೆ ಬದಲಿಗೆ ಪುನರ್ಭರ್ತಿ (ರೀಚಾರ್ಜ್ ಬಲ್) ಎಲ್ಇಡಿ ಬಲ್ಬ್ ಲೈಟ್ಸ್ ಗಳನ್ನು ನೀಡುವ ಪುನರ್ಬಳಕೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದೆಂದರು.
ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರವು ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ನೀಡುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು 1000 ರೂ ಬೆಲೆಯುಳ್ಳ ಎರಡು ಬರ್ನರ್ ಗಳ ಗ್ಲಾಸ್ ಸ್ಟವ್ ಅನ್ನು ನೀಡುತ್ತದೆ. ರಾಜ್ಯವನ್ನು ಶೇ. 100 ರಷ್ಟು ಎಲ್ಪಿಜಿ ಯುಕ್ತ ರಾಜ್ಯವನ್ನಾಗಿಸಲು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ವ್ಯಾಪ್ತಿಗೆ ಒಳಪಡದೇ ಇರುವ ಕುಟುಂಬಗಳಿಗೂ ಸಹ ರಾಜ್ಯ ಸರ್ಕಾರ ವತಿಯಿಂದ ಉಚಿತ ಅನಿಲ ಸಂಪರ್ಕವನ್ನು ಅನಿಲಭಾಗ್ಯ ಯೋಜನೆಯಡಿ ನೀಡಲು ಉದ್ದೇಶಿಸಿದೆ. ಗ್ರಾಮೀಣ ಭಾಗದ ಗ್ಯಾಸ್ ಸಂಪರ್ಕವಿರುವ ಗ್ರಾಹಕರಿಗೆ ಕಾರ್ಡ್ ಗೆ 1 ಲೀಟರ್ ಸೀಮೆಎಣ್ಣೆಯನ್ನು ಸಹ ನೀಡಲಾಗುವುದು ಎಂದರು.
ಅನಿಲಭಾಗ್ಯ ಯೋಜನೆಯಡಿ 5 ಲಕ್ಷ ಅರ್ಹ ಬಡಕುಟುಂಬಗಳೀಗೆ ಉಚಿತವಾಗಿ ಅನಿಲ ಸಂಪರ್ಕಕ್ಕಾಗಿ ಪ್ರತಿ ಫಲಾನುಭವಿಗಳಿಗೆ 1,600 ರೂ. ಸಹಾಯಧನ ವಿತರಣೆ ಹಾಗೂ ಅನಿಲ ಸೌಲಭ್ಯದೊಂದಿಗೆ ಗ್ರಾಮೀಣ ಪ್ರದೇಶದ ಪಡಿತರ ಚೀಟಿದಾರರಿಗೆ ತಮಗೆ ಹಂಚಿಕೆಯಾದ ಸೀಮೆಎಣ್ಣೆ ಅಥವಾ ಉಚಿತ ರೀಚಾರ್ಜ್ ಬಲ್ ಎಲ್ಇಡಿ ಸೆಟ್ಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.