ಬೆಂಗಳೂರು: ನೀರಿನ ಟ್ಯಾಂಕರ್ ವಾಹನದ ಚಕ್ರ ಮೈಮೇಲೆ ಹರಿದು ರೋಹಿತ್ (35) ಎಂಬುವರು ಮೃತಪಟ್ಟಿದ್ದು, ಈ ಬಗ್ಗೆ ಎಚ್ಎಸ್ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’ಎಚ್ಎಸ್ಆರ್ ಲೇಔಟ್ನ 27ನೇ ಮುಖ್ಯರಸ್ತೆಯ ಇಬ್ಬಲೂರು ಜಂಕ್ಷನ್ನಲ್ಲಿ ರೋಹಿತ್ ತೆರಳುತ್ತಿದ್ದರು. ಅತೀ ವೇಗವಾಗಿ ಬಂದ ಟ್ಯಾಂಕರ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ರೋಹಿತ್ ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದು ಹೋಗಿತ್ತು.’
‘ಸ್ಥಳೀಯ ನಿವಾಸಿ ರೋಹಿತ್, ಕಟ್ಟಡ ನಿರ್ಮಾಣ ಕಂಪನಿಯೊಂದರ ಸಹಾಯಕ ವ್ಯವಸ್ಥಾಪಕ.
ದ್ವಿಚಕ್ರ ವಾಹನದಲ್ಲಿ ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ತೀವ್ರ ಗಾಯಗೊಂಡ ರೋಹಿತ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ. ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ಗೊತ್ತಾಗಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದೂ ತಿಳಿಸಿದರು.