ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರ ತಾರಕಕ್ಕೇರಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಷ ಹೊರಹಾಕಿದ್ದಾರೆ. ಅಡ್ಜಸ್ಟ್ಮೆಂಟ್ ರಾಜಕಾರಣ ಆರಂಭವಾಗಿದ್ದೇ ನಿಮ್ಮಿಂದ ಎಂದು ಟೀಕಿಸಿದ್ದಾರೆ.
‘ಕಟ್ಟವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ. ನಿಮಗೆ ಎಲ್ಲವನ್ನು ಕೆಡವಿ ಗೊತ್ತೇ ಹೊರತು ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದರು ನಮ್ಮ ಬಾಗಿಲಿಗೆ ಕಾಂಗ್ರೆಸ್ ನಾಯಕರು ಬಂದರು. ಸರ್ಕಾರದ ನೇತೃತ್ವ ವಹಿಸಿ ಎಂದು ಕೇಳಿದರು.
ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸೂತ್ರಧಾರ?’ ಎಂದು ಪ್ರಶ್ನಿಸಿದ್ದಾರೆ. ‘ನಾನು ಜೆಡಿಎಸ್ನವರ ಮನೆ ಬಾಗಿಲಿಗೆ ಹೋಗೇ ಇಲ್ಲಾ ಅಂತೀರಿ, ನಿಮ್ಮನ್ನು ಕರೆದವರು ಯಾರು? ನಾವು ಎಲೆ-ಅಡಿಕೆ ಕೊಟ್ಟು ಕರೆದಿದ್ವಾ? ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದ್ದು ಯಾರು ಮಿಸ್ಟರ್ ಟರ್ಮಿನೇಟರ್’ ಎಂದು ಪ್ರಶ್ನಿಸಿದ್ದಾರೆ.