ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರೊಂದಿಗೆ ಇಡೀ ರಾಜ್ಯದಲ್ಲೇ ಪ್ರಥಮ ಬಾರಿಗೆ ಅತ್ಯಂತ ಮಹತ್ತರವಾದ ಮೊದಲ ಸಾವಿರ ದಿನದ ಅರಿವು ಕಾರ್ಯಕ್ರಮವನ್ನು ಹಲವಾರು ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಪಿರುಲಿನಾ ಫೌಂಡೆಷನ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಅಪೌಷ್ಠಿಕತೆ ನಿವಾರಣೆ ಮತ್ತು ತಡೆಗಟ್ಟುವಿಕೆ ಕುರಿತಾದ ಸಾವಿರ ದಿನಗಳ ಮಹತ್ವದ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಒಂದು ಮಗು ಮೊದಲ ಸಾವಿರ ದಿನದಲ್ಲಿ ಅಪೌಷ್ಠಿಕತೆಗೆ ತುತ್ತಾದರೆ, ಆ ವ್ಯಕ್ತಿ ಜೀವನ ಪರ್ಯಂತ ಶಿಕ್ಷಣ, ವ್ಯವಹಾರ, ಉದ್ಯೋಗ, ಎಲ್ಲ ರಂಗಗಳಲ್ಲಿಯೂ ವಿಫಲವಾದ ಸಂದರ್ಭದಲ್ಲಿ ಆತನಿಗೆ ಸರ್ಕಾರದ ನಾನಾ ಸೌಲಭ್ಯಗಳನ್ನು ನೀಡಿ, ಮೇಲೆತ್ತುವ ಕೆಲಸ ಮಾಡಬೇಕಾಗುತ್ತದೆ. ಇಂತಹ ಸನ್ನಿವೇಶಗಳನ್ನು ತಪ್ಪಿಸಿ, ಉತ್ತಮ ನಾಗರೀಕನನ್ನಾಗಿ ರೂಪಿಸಿ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕರು ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.
ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಡಾ. ಸಿ.ಎಸ್.ಕೇದಾರ್ ಅವರು ಮಾತನಾಡಿ ಮನುಷ್ಯ ಜೀವನದ ಮೊದಲ ಸಾವಿರ ದಿನಗಳಾದ 270 ದಿನಗಳು(9 ತಿಂಗಳ ಗರ್ಭಿಣಿ), 365 ದಿನಗಳು(1 ವರ್ಷ), 365ದಿನಗಳು(2ನೇ ವರ್ಷ) ಅತ್ಯಂತ ಪ್ರಮುಖವಾಗಿದ್ದು, ಮನುಷ್ಯ ದೇಹದ ಅಂತ್ಯಂತ ಶ್ರೇಷ್ಠ ಅಂಗವಾದ ಮೆದುಳು ಬೆಳೆಯುವುದು ಈ 1000 ದಿನಗಳು ಮಾತ್ರ ಎಂದರಲ್ಲದೆ, ಈ ಸಮಯದಲ್ಲಿ ಮಗುವಿನ ಪಾಲನೆ, ಪೋಷಣೆಯಲ್ಲಿ ಕೊರತೆ ಉಂಟಾಗಿ, ಮಗುವು ಅಪೌಷ್ಠಿಕತೆಗೆ ತುತ್ತಾದಲ್ಲಿ ಮತ್ತೆಂದೂ ಜೀವನದಲ್ಲಿ ಪೌಷ್ಟಿಕತೆಯ ಕೊರತೆಯನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕುಂದಿದ ಬುದ್ಧಿಶಕ್ತಿಯುಳ್ಳ ಮಕ್ಕಳು(ಮೆದುಳಿನ ಬೆಳವಣಿಗೆ) ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಭವಿಷ್ಯದ ದುಡಿಮೆಯ ಸಂದರ್ಭದಲ್ಲಿ ಹಿಂದುಳಿದು ಬಡತನಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರಲ್ಲದೆ, ದೇಶದ ಅಭಿವೃದ್ಧಿಯ ದೃಷ್ಠಿಯಿಂದ ನಾವೆಲ್ಲರೂ ಸಾವಿರ ದಿನದ ಸಂಕಲ್ಪ ಮಾಡಿ, ಪ್ರತಿಯೊಬ್ಬರಲ್ಲೂ ಸಾವಿರ ದಿನದ ಮಹತ್ವದ ಅರಿವನ್ನು ಮೂಡಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಸಹಕಾರಿಯಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ತುಮಕೂರು ಸ್ಪಿರುಲಿನಾ ಫೌಂಡೇಷನ್ನ ಅಧ್ಯಕ್ಷರು, ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.