ಬೆಂಗಳೂರು: ಮೈಸೂರಿನ ಕೆ.ಆರ್. ನಗರದ ವೇದಾಂತ ಭಾರತಿ ಸಂಸ್ಥೆ ಹಾಗೂ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶಂಕರಾಚಾರ್ಯ ವಾಜ್ಞೇಯ ಸೇವಾಪರಿಷತ್ತಿನಿಂದ ಜನನ, ಮರಣ, ಪುನರ್ಜನ್ಮ ಮತ್ತು ಅವತಾರ ಎಂಬ ವಿಷಯ ಕುರಿತಾದ “ಮೃತ್ಯುಂಜಯ” ಅಂತರಾಷ್ಟ್ರೀಯ ಸಮ್ಮೇಳನ ಹಲವು ಮಹತ್ವದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದೆ. ವೇದ, ವೈದ್ಯ ವಿಜ್ಞಾನಗಳಲ್ಲಿನ ಕೌತುಗಳನ್ನು ಅನಾವರಣಗೊಳಿಸಿದೆ.
ಈ ಕುರಿತಂತೆ ಮಾತನಾಡಿದ ವೇದಾಂತ ಭಾರತಿ ಸಂಸ್ಥೆಯ ನಿರ್ದೇಶಕ ಡಾ. ಶಶಿಧರ ಹೆಗಡೆ ಅವರು, ಶಂಕರಭಾಗತ್ಪಾದರ ಪ್ರಕರಣ ಗ್ರಂಥ, ಸ್ತೋತ್ರಗಳಲ್ಲಿ ಜನನ, ಮರಣ, ಪುನರ್ಜನ್ಮ, ಅವತಾರ ವಿಷಯಗಳ ಕುರಿತು ಮಾಡಿರುವ ಉಪದೇಶ ಮತ್ತು ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಸಮಾಜಕ್ಕೆ ತಿಳಿಸಿಕೊಂಡುವಂತೆ ವಿದ್ವಾಂಸರು ಸಲಹೆ ಮಾಡಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿನ ಸಂಶೋಧನೆ ಕುರಿತು ಮನಶಾಸ್ತ್ರಜ್ಞರು, ವೈದ್ಯಕೀಯ ಸಮೂಹ ವಿಷಯ ಮಂಡನೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ವ್ಯಾಸ ಯೋಗ ವಿವಿ ಕುಲಪತಿ ಡಾ.ಎಚ್.ಆರ್. ನಾಗೇಂದ್ರ ಅವರು ಆರಂಭಿಕವಾಗಿ ಈ ವಿಷಯದ ಬಗ್ಗೆ ಪ್ರಬುದ್ಧವಾಗಿ ವಿಚಾರ ಮಂಡಿಸಿದರು. ರಾಮಕೃಷ್ಣ ಮಠದ ಆತ್ಮ ಪ್ರಿಯಾನಂದ ಸರಸ್ವತಿ ಸ್ವಾಮೀಜಿ, ಆತ್ಮಶ್ರದ್ಧಾನಂದಜೀ ಮಹಾರಾಜ್ ಮತ್ತಿತರರು ಸಮ್ಮೇಳನದಲ್ಲಿ ವಿಸ್ತಾರವಾಗಿ ವಿಷಯ ಮಂಡಿಸಿದರು.
ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ನ ಖಜಾಂಚಿ ಗೋವಿಂದ ದೇವಗಿರಿ ಭಗವದ್ಗೀತೆ, ಮುಂತಾದ ಗ್ರಂಥಗಳಲ್ಲಿ ಜನನ, ಮರಣಗಳ ಬಗ್ಗೆ ನೀಡಿರುವ ವ್ಯಾಖ್ಯಾನಗಳನ್ನು ಪ್ರಸ್ತುತಪಡಿಸಿದರು. ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಮಹಾ ಸ್ವಾಮೀಜಿ ಅವರು ಸಮ್ಮೇಳನದ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು ತಿಳಿಸಿದ್ದಾರೆ.
ಅಯೋಧ್ಯೆಯ ಡಾ. ರಾಮಮನೋಹರ ಲೋಹಿಯಾ ಅವಧ್ ವಿವಿ ವಿವೇಕಾನಂದ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಸಮಾವೇಶದಲ್ಲಿ ದೇಶದ ಪ್ರಸಿದ್ಧ ವೈದ್ಯರು, ಪರಿಣಿತ ಮನಶಾಸ್ತ್ರಜ್ಞರು, ಆಯುರ್ವೇದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ವೇದ ವಿದ್ವದ್ವರೇಣ್ಯರು ಭಾಗವಹಿಸಿದ್ದರು.