ಬೆಂಗಳೂರು: ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಗೃಹ ಸಚಿವ ಮತ್ತು ಮಹಿಳಾ ಆಯೋಗ ವಿರುದ್ಧ ಬಿಜೆಪಿ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಕಿಡಿಕಾರಿದ್ದಾರೆ. ಗೃಹ ಸಚಿವರು ರಾಜಿನಾಮೆ ಕೊಟ್ಟು ಹೊರಗೆ ಹೋಗಬೇಕು ಎಂದು ಮಂಜುಳಾ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಜುಳಾ, ಮೂರು ಜನರ ಮೇಲೆ ಆ್ಯಸಿಡ್ ಹಾಕಿರುವುದು ಕೇರಳದಿಂದ ಬಂದವರು ಎಂಬ ಮಾಹಿತಿ ಇದ್ದು, ಕೇರಳದವರಿಗೆ ಇಲ್ಲಿ ಯಾಕೆ ರೆಡ್ ಕಾರ್ಪೆಟ್ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಮಹಿಳಾ ಆಯೋಗ ಸ್ಥಳಕ್ಕೆ ಹೋಗಿ ವಿಚಾರಿಸಬೇಕು ಎಂದು ಒತ್ತಾಯಿಸಿರುವ ಮಂಜುಳಾ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ನಿನಗೆ ಅಲ್ಲಿ ಕೆಲಸ ಮಾಡಲು ಆಗಲ್ಲ ಅಂದ್ರೆ, ಬಿಟ್ಟು ಹೋಗಿ, ನಿಮ್ಮ ಪುರುಷ ಸಚಿವರು ಕೆಲಸ ಮಾಡಲು ಬಿಡದಿದ್ರೆ ಹೊರಗೆ ಬನ್ನಿ ಎಂದು ಮಂಜುಳಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಗ್ರಹಿಸಿದ್ದಾರೆ.